ವಿಷಯಕ್ಕೆ ಹೋಗಿ

ಮೊಸರು ಮಾರುವ ಹುಡುಗನ ಸೈಕಲ್ ಮತ್ತು ಪ್ಲಾಶ್‍ಬ್ಯಾಕ್ ನೆನಪು





‘ಕಾಲನ ಕೈಗೆ ದೇವರು ಸೃಷ್ಟಿ ಮಾಡಿದ ಜಗತ್ತು ಉಳಿಯುವದಿಲ್ಲವೆಂದ ಮೇಲೆ ನಾವು ಯಾವ ಲೆಕ್ಕ’ ಏಲ್ಲೋ ಓದಿದ ಅಣಿಮುತ್ತು ಮೊನ್ನೆ ದುತ್ತನೆ ಮೆದುಳಿನಲ್ಲಿ ಗುಂಗಿ ಹುಳದಂತೆ ಕಾಡತೊಡಗಿತು. ಕಾರಣವಿಷ್ಟೇ, ಎಮ್.ಎ ಮುಗಿಯುವ ಸಮಯವೂ ಹೌದು, ಅದಕ್ಕಿಂತ ಮುಖ್ಯವಾಗಿ “ಆನಂದಮಾರ್ಗ ಆಶ್ರಮ” ತೊರೆಯಬೇಕಲ್ಲ ಎನ್ನುವ ನೋವು. ಆ ನೋವಿಗೆ ಕಾರಣವಾದವನು ದಿನಾಲೂ ಗಟ್ಟಿ ಕೆನೆ ‘ಮೊಸರು ಮಾರುವ ಹುಡುಗ’ ಮತ್ತು ಆತನ ‘ಸೈಕಲ್’.
ಆ ಹುಡುಗ 7ನೇ ತರಗತಿ. ಯಲ್ಲಪ್ಪ ಮನ್ಸೂರ. ಸುಮಾರು 3 ಕಿ.ಮಿ ಸೈಕಲ್ ತುಳಿದು ಮೊಸರು ಮಾರುವ ಕಾಯಕ ಮಾಡುತ್ತಾನೆ. ಅದಕ್ಕಿಂತ ಹೆಚ್ಚಾಗಿ ಮುಂಜಾನೆಯ ಎಳೆ ಬಿಸಿಲಿನಲ್ಲಿ ಮಲಗಿದ್ದ ಹಾಸಿಗೆ ಹೊದ್ದು ಮಲಗಿದ್ದ ನನಗೆ ಎಚ್ಚರಿಸುವ ಅಲರಾಂ ಬೆಲ್ ಎಂತಲೇ ಹೇಳಬಹುದು.
ಅವನ ಸೈಕಲ್ ಮಾಯಲೋಕದ ಕಿನ್ನರರು ತಮ್ಮ ವಾಹನಗಳಿಗೆ ಶೃಂಗಾರ ಮಾಡಿದಂತೆ ಗಾಲಿಗಳಿಗೆ ರಿಬ್ಬನ್ ಸುತ್ತಿ, ಯುದ್ಧಕ್ಕೆ ಸಿದ್ಧನಾಗಿದ್ದೆನೆ ಎನ್ನುವ ರೀತಿ ಭಾವುಟ ತೋರಿಸಿ, ಗೆಂಡೆಗಳನ್ನು ಗಾಳಿಗೆ ಹಾರಾಡಿಸುತ್ತಾ ಗಂಟೆ ಬಾರಿಸುವ ಗತ್ತು ನನ್ನನ್ನು ಬಾಲ್ಯದ ಪ್ಲಾಶ್‍ಬ್ಯಾಕ್‍ಗೆ ಕರೆದೊಯ್ಯುವಂತೆ ಮಾಡಿತ್ತು.
ತೂತು ಬಿದ್ದು ಪುಕ್ಸಟ್ಟೆ ಅಂಡು ಕಾಣಿಸುವ ದೊಗಳೆ ಚಡ್ಡಿ ಹಾಕಿಕೊಳ್ಳುತ್ತಿದ್ದ ವಯಸ್ಸಿನ ಹುಡುಗ ನಾನಾಗಿದ್ದೆ. ‘ಮೊದ ಮೊದಲು ಕೊಂಡ ಹೀರೋ ಸೈಕಲ್’ ಎಂಬತೆ ಪುಟ್ಟ ಸೈಕಲ್ ನಮ್ಮ ಮನೆಯ ಅಂಗಳವನ್ನು ಅಲಂಕರಿಸಿತ್ತು. ಇಡೀ ಊರಿಗೆ ಮೊದಲ ಸೈಕಲ್. ಊರಿನ ಜನ ಬಂದು ಅದನ್ನು ಮೈಸೂರು ಮಹಾರಾಜರ ಅಂಬಾರಿ ಹೋರುವ ಆನೆಯಂತೆ ನೋಡಿದ್ದೋ ನೋಡಿದ್ದು! ಅಕ್ಕನ ಮೊದಲ ಪೂಜೆಯಿಂದ ಅದರ ಉದ್ಘಾಟಣೆ ಶುರು. ಅಕ್ಕ ಅಲ್ಪಸ್ವಲ್ಪ ಸೈಕಲ್ ಕಲಿತಿದ್ದರಿಂದ ನನಗೆ ಆಕೆಯೆ ಗುರು. ಆಕೆಗೆ ಪೂಸಿ ಹೊಡೆದು ಅವಳಿಂದ ಸೈಕಲ್ ಕಲಿಯಬೇಕು ಎನ್ನುವ ಹಟ ನನ್ನೊಳಗೆ. ಆದರೆ ಅಕ್ಕ ಒಂಥರಾ ಸ್ವಾರ್ಥಿ ಸ್ವಭಾವದವಳು. ಆದರೂ ನನಗೆ ಅದನ್ನು ತಳ್ಳುವ ಪಾಟ ಕಲಿಸಿಕೊಟ್ಟಳು. ನಾನು ಮಾತ್ರ ಅದನ್ನು ತಳ್ಳಬೇಕು, ಅವಳು ಮಹಾರಾಣಿಯ ಹಾಗೆ ಜಮ್ಮಂತ ಸೀಟಿನಲ್ಲಿ ಕುಳಿತು ಹೋಗಬೇಕು!
ಬಂದ ಒಂದು ತಿಂಗಳವರೆಗೂ ನನಗೆ ಸೈಕಲ್ ನಡೆಸುವವದಿರಲಿ ಅಟ್‍ಲಿಸ್ಟ್ ಅದನ್ನು ಹಿಡಿಯುವ ಅಧಿಕಾರ ಕೊಡಲಿಲ್ಲ. ನನಗೋ ಹೊಟ್ಟೆಯಲ್ಲಿ ಮೆಣಸಿನ ಕಾರ ಕಲಿಸಿ ಕರಳು ಹಿಂಡಿದಂತೆ ಭಯಂಕರ ಸಿಟ್ಟು.
ಒಂದು ದಿನ ಅಪ್ಪನ ಕಣ್ಣು ತಪ್ಪಿಸಿ ಸೈಕಲ್‍ನ್ನು ಮೆಲ್ಲಗೆ ಊರ ಶಾಲೆಯ ಮೈದಾನಕ್ಕೆ ತಳ್ಳಿಕೊಂಡು ಏದುರುಸಿರು ಬಿಡ್ಡುತ್ತಾ ಬಂದಾಗ ಎದುರು ಮನೆಯ ಅಣ್ಣ ಬಂದು ಕಲಿಸುತ್ತೇನೆ ಬಾ ಎಂದು ಮೊದಲು ಆತ ಎರಡ್ಮೂರು ರೌಂಡು ಸುತ್ತಾಡಿಸಿ ನನ್ನನ್ನು ಸಾಯಂಕಾಳ ಸೂರ್ಯ ಮೂಳುಗುವವರೆಗೂ ಹಿಂದೆ ಕೂಡಿಸಿ ತಾನು ಮಾತ್ರ ಊರ ತುಂಬೆ ಮೆರವಣಿಗೆ ಮಾಡುತ್ತಾ ಮಜಾ ಮಾಡಿದ. ಈ ವಿಷಯ ಅಪ್ಪನಿಗೆ ಗೊತ್ತಾಗಿ ಹುಟ್ಟುಡುಗೆಯಲ್ಲಿ ನಿಲ್ಲಿಸಿ ‘ಏನಾರೆ ಹೆಚ್ಚು ಕಮ್ಮಿ ಆತಂದ್ರ’ ಅಂತ ಬಯ್ದು ಬೆಲ್ಟ್‍ನಿಂದ ಬಾರಿಸಿದ. ಅವು ಪೋಸ್ಟಾಫೀಸ್‍ನಲ್ಲಿ ಹಾಕುವ ಸಿಕ್ಕಾ ಎಂಬಂತೆ ಮೂಡಿ ಒಂದು ವಾರ ‘ಸೈಕಲ್’ ಕಡೆ ತಲೆಹಾಕಿ ಮಲಗಲಿಲ್ಲ. ಅಮ್ಮನಿಗೆ ಕನಿಕರ ಬಂದು ನಾಳೆಯಿಂದ ಕಲಿಯುವಂತೆ ಮಲಗು ಎಂದು ಬೆನ್ನು ಸವರಿದಳು.
ಅಕ್ಕ ನನ್ನ ಸ್ಥಿತಿ ಕಂಡು ನಗುತ್ತಾ ಸೈಕಲ್ ಕಲಿಸುತ್ತೇನೆ ಬಾರೋ ಎಂದಾಗ ನನಗೆ ಎಲ್ಲಿಲ್ಲದ ಸಂತೋಷ. ಅಷ್ಟು ಇಷ್ಟು ಕಲಿತು, ಬ್ಯಾಲನ್ಸ್ ಮಾಡಿ, ಕಡೆಗೆ ಸ್ವತಃ ಪ್ರಯತ್ನ ಮಾಡಿ ಮೊಣಕಾಲು ಕೆತ್ತಿ ಹೋದರು ‘ಏಕಲವ್ಯ’ ನಂತೆ ಅಕ್ಕನನ್ನು ತಿರಸ್ಕರಿಸಿ ಸೈಕಲ್ ಓಡಿಸತೊಡಗಿದೆ. ಅದರಲ್ಲಿ ಸರ್ಕಸ್ ಮಾಡುವದು, ಬ್ರೇಕ್ ಹಾಕುವದು ಇತ್ಯಾದಿ ಸ್ಟಂಟ್‍ಗಳನ್ನು ಮಾಡುತ್ತಾ ದಿನಕ್ಕೆ ತಲೆಯಲ್ಲಿ ನಾಲ್ಕಾರೂ ಗುಮಟೆಗಳನ್ನು ಉಬ್ಬಿಸಿಕೋಳ್ಳುತ್ತಿದ್ದೆ. ಆಗ ಅದರಲ್ಲಿ ‘ಮಿ.ಪರಫೆಕ್ಟ್’ ಆದೆ.

ಇದು ನಡೆದ ವೃತ್ತಾಂತ. ಆದರೆ ನಡೆಯಬಾರದ ವೃತ್ತಾಂತವೊಂದು ನಡೆದು ಹೋಗಿತು. ಬಾಲ್ಯದ ಗೆಳಯಂನಂತೆ ಅದಾ ನನ್ನ ಜೊತೆಯಲ್ಲಿಯೇ ಓಡಿ, ಗಾಳಿ ಮಳೆಯನ್ನದೇ ನನ್ನನ್ನೂ ಕೂಡಿಸಿಕೊಂಡು, ತಾನೂ ಮಾತ್ರ ದಣಿದು ಸುಸ್ತಾದ ಸೈಕಲ್ ಎಮ್.ಎ ಬಂದಾಗ ಮೂಲೆಯಲ್ಲಿ ಹ್ಯಾಪೂಮೋರೆ ಹಾಕಿಕೊಂಡು ನನ್ನನ್ನು ಬಿಳ್ಕೊಟ್ಟಿತು. ಬಂದ ವಾರದಲ್ಲಿ ನನಗೆ ಗೊತ್ತಿಲ್ಲದೆ ತಮ್ಮ ‘ಮಂಕುತಿಮ್ಮ’ ಅದನ್ನು ಮಾರಿದಾಗ ಮುಚ್ಚಣಿಕೆ ಕಳೆದು ಹೋದ ಪೆನ್ನಿಗೆ ನೋವಾಗುವಷ್ಟು ಅತ್ತು ಗೆಳೆಯರಿಗೆ ಸ್ಯಾಡ್ ಪಾರ್ಟಿ ಕೊಡಿಸಿದೆ. ಅದು ಕೊಡುವ ಹಳೆಯ ನೆನಪುಗಳು ಇಂದು ಹೃದಯದಲ್ಲಿ ತೂತು ಕೊರೆಯುತ್ತಿದೆ. ಡಬಲ್ ರೈಡಿಂಗ್ ಮಾಡಿದ್ದು, ಎದುರು ಮನೆ ಹುಡುಗಿಗೆ ಗುದ್ದಿ ಅವರಪ್ಪನಿಂದ ಹಿಡಿದು ನಮ್ಮಪ್ಪನವರೆಗೂ ಒದೆ ತಿಂದಿದ್ದು, ಸ್ವಲ್ಪದರಲ್ಲಿಯೇ ಬಸ್ಸು ಗುದ್ದುವ ಪ್ರಾಣಾಪಾಯದಿಂದ ಪಾರಾಗಿದ್ದು, ಪಂಚರ್ ಆಗಿ ಮೂರು ಕಿ.ಮಿ ತಳ್ಳಿಕೊಂಡು ಬಂದಿದ್ದು, ಸಿಂಗಲ್ ಆಗಿ ಅದರ ಜೋತೆ ಪೋಟೋ ಹೊಡೆಸಿಕೊಂಡಿದ್ದು ಎಲ್ಲವೂ ಕಾಡತೊಡಗಿದೆ.
ಅಂದಿನ ಅನುಭವ ಇಂದಾಗುತ್ತಿದೆ. ‘ಆನಂದ ಮಾರ್ಗ ಆಶ್ರಮ’ ತೊರೆಯುವ ಸಂಕಟ. ಎರಡು ವರ್ಷ ಇಲ್ಲಿನ ಗೋಡೆ, ಮಳೆ ಬಂದರೆ ಸೋರುವ ಹೆಂಚು, ಗೆಳಯರಾದ ಹಾವಿನ ಮರಿಗಳು, ಕೆಲಮ್ಮೊಮ್ಮೆ ಹಾಸಿಗೆ ಹಂಚಿಕೊಳ್ಳುವ ಕಪ್ಪೆಮರಿಗಳು, ಹೆಮ್ಮರವಾಗಿ ಬೆಳದು ನಿಂತಿರುವ ನುಗ್ಗೆಕಾಯಿ ಮರ, ನಾನೇ ಶ್ರಮದಾನ ಮಾಡಿ ಕಟ್ಟಿದ ಕಟ್ಟೆ, ಹಿತವಾದ ತಂಗಾಳಿ, ಪ್ರಶಾಂತವಾದ ವಾತಾವರಣ, ಟೈವಾಕ್ ಕಂಪನಿಯ ಸೈರನ್ನು, ಬಾಜು ರೂಮಿನ ‘ಡಿಕೆ’ ಎಂತಿರುವ ಅಶೋಕ ಮಹಾರಾಜ್ ಒಂದಲ್ಲ ಎರಡಲ್ಲ ಇಡೀ ಬದುಕಿನ ಭಾಗವೇ ನನಗೆ ಟಾಟಾ ಮಾಡುವ ಸಮಯ ಬಂದಿದೆ.
ಆ ಹುಡುಗನ ಸೈಕಲ್ ನೋಡಿದಾಗ ‘ಜೀವನದ ಸೈಕಲ್ ಓಡಿಸಲು ಧಾರವಾಡದ ಊರಿಗೆ ಬಂದರುವೆ, ಮತ್ತೇಕೆ ಚಿಂತೆ ಹಿಂದಿನ ಊರಿನ ಹಾದಿಬಿಟ್ಟು ನಡೆ ಮುಂದಿನ ಊರಿಗೆ’ ಎನ್ನುವ ಮಾತು ನನ್ನೊಳಗೆ ತಿಗಣೆಯಂತೆ ಕಚ್ಚಿ ಅಣುಕಿಸಿದಂತಾಗುತ್ತಿದೆ.
ಬಂದು ಕಲಿತದೇಷ್ಟೂ, ಹಾಳು ಮಾಡಿಕೊಂಡಿದೇಷ್ಟೂ ಎಂದು ಮೌಲ್ಯಮಾಪನ ಮಾಡಿದಾಗ ಮುಂದಿನ ಜೀವನದ ಬಗ್ಗೆ ನಡುಕ ಹುಟ್ಟತೊಡಗಿದೆ. ಸೋಮಾರಿತನದಿಂದ ಓದದೇ ಬರೆಯದೇ ಸಿನಿಮಾ, ಪಾರ್ಟಿ, ಪ್ರವಾಸ ಅಂತ ಕ್ಲಾಸಿಗೆ ಚಕ್ಕರ್ ಹಾಕಿ ಮಜಾಮಾಡಿದ್ದು ಈಗ ಮುಳ್ಳಿನಂತೆ ಚುಚ್ಚುತ್ತಿದೆ. ಗಾಲಿಗೆ ಮುಳ್ಳು ಚುಚ್ಚಿದರೆ ಸೈಕಲ್ ಓಡುವದಿಲ್ಲ, ಜೀವನಕ್ಕೆ ಸೋಮಾರಿತನದ ಮುಳ್ಳು ಚುಚ್ಚಿದರೆ?
ಲೇಖನ : ಸಂಗಮೇಶ ಡಿಗ್ಗಿ
8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಏಕಾಂಗಿಯೊಬ್ಬನ ದಾರಿಯ ಕವಲುಗಳು...

ಇಷ್ಟೂ ದೂರ ಸಾಗಿ ಬಂದರೂ ನಾನು ಇನ್ನು ಗುರಿ ಮುಟ್ಟೆ ಇಲ್ಲ ಎಂಬ ಕಠೋರ ಸತ್ಯ ಅರಿವಿಗೆ ಬರುವದು ಒಮ್ಮೆ ಕತ್ತು ತಿರುಗಿಸಿ ಹಿಂದೆ ನೋಡಿದಾಗ. ನಾವು ಅಂದುಕೊಂಡ ಕನಸು, ನಾವು ಕಟ್ಟಿಕೊಂಡ ಗುರಿಯನ್ನು ತಲುಪುವ ಹಾದಿಯಲ್ಲಿ ನೂರೆಂಟು ಕವಲುಗಳು, ತಗ್ಗುದಿನ್ನೆಗಳು ಹೆಡೆ ಬಿಚ್ಚಿ ಸ್ವಾಗತಿಸುತ್ತವೆ. ನಮ್ಮ ಮನಸಿನ ನಿರ್ಧಾರವನ್ನು ಕೇಳದೆ ಬೇರೆ ಯಾರದೋ ಮಾತಿಗೆ ನಮ್ಮ ಕನಸನ್ನು ಚಿವುಟಿ ಮತ್ತೊಬ್ಬರ ಕನಸಿಗೆ ಜೀತದಾಳಾಗಿ ದುಡಿಯುವ ಪರಿ ದಿಕ್ಕು ದೆಸೆಯಿಲ್ಲದೆ ಸುತ್ತುವ ದಿಕ್ಸೂಚಿಯಿಲ್ಲದ ಹಡಗಿನಂತಾಗುತ್ತದೆ. ನಾನು ಹೊಗುವ ದಾರಿ ನನಗೆ ಮಾತ್ರ ಸ್ಪಷ್ಟವಾಗಿ ಕಾಣುತ್ತದೆ ಹೊರತು ಬೇರೆ ಯಾರಿಗೂ ಅಲ್ಲ. ಅದು ಎಂದಿಗೂ ಕವಲೊಡೆದು ಅಪರಿಚಿತ ಊರಿಗೆ ಹೋಗುವದಿಲ್ಲ. ಅಂದುಕೊಂಡ ಗೂಡಿಗೆ ನಮ್ಮನ್ನು ಕರೆದೊಯ್ಯುತ್ತದೆ. ಅಲ್ಲಿ ನಮಗಾಗಿ ಸುಖ ಸಂತೋಷದ ನಿಧಿ ಕಾದು ಕೂತಿರುತ್ತದೆ. ನಾನು ಸಾಗುವ ಹಾದಿಯಲ್ಲಿ ಮುಳ್ಳಿದೆ ಅಂತ ಗೊತ್ತಿದ್ದರೂ ಅದು ನನಗೆ ಅಚ್ಚುಮೆಚ್ಚಿನ ಹಾದಿಯಾಗಿರುತ್ತದೆ. ಅಲ್ಲಿ ನನಗಾಗಿ ಹೂವು ಹಾಸಿಗೆ ಹಾಸಿರುತ್ತದೆ. ತಂಪು ತಂಗಾಳಿಯ ಜೊತೆ ನೆರಳು ನೀಡುತ್ತದೆ. ಅದಕ್ಕೆ ನಾನು ಮಾಡಬೇಕಾದದ್ದು ಇಷ್ಟೇ, ನನಗಾಗಿ ನಾನು ಬದುಕುವದು. ಇದು ಒಂತರಾ ಸ್ವಾರ್ಥ ಎನಿಸಿದರೂ ಪರರಿಗೋಸ್ಕರ ದಿನಗಟ್ಟಲೆ ವ್ಯಯಿಸುವ ನಾನು ನನಗೋಸ್ಕರ ಒಂದಷ್ಟು ಸಮಯ ಕೊಡುವದರಲ್ಲಿ ಏನು ತಪ್ಪಿದೆ..? ಅದೇ ಸಂತೆಯ ಪರಿಚಿತವಿರುವ ಮಂದಿಯ ನಡುವೆ ನಮ್ಮ ದಾರಿ ಸಿಕ್ಕು ದಿಕ್ಕಾಪಾಲಾಗಿ ದಡ

ಸೂರ್ಯಪುತ್ರರ ನೋವಿಗೆ ಇಲ್ಲಿದೆ ಪರಿಹಾರ

ಹರೆಯದ ವಯಸಲ್ಲಿ ಬೇಗನೆ ಏಳುವದು ಕಷ್ಟಕಣ್ರೀ. ಗಲ್ಲಿಗೇರಿಸುವ ಶಿಕ್ಷೆಯಾದ್ರೂ ಕೊಡಿ ಬೆಳಗ್ಗಿನ ಜಾವದಲ್ಲಿ ಏಳುವ ಕೆಲಸ ಹಚ್ಚಬೇಡಿ. ರಾತ್ರಿ ಮೂರರವರೆಗೆ ಸಿನಿಮಾ, ಮೇಸೆಜು, ವಾಟ್ಸಾಪ್ ಅಂತ ಟೈಮ್‍ತಿಂದು ಮುಸುಕು ಹೊದ್ದು ಮಲಗಿದಾಗ ಜಗದ ಪರಿವೆ ಇಲ್ಲದೆ ಲೋಕದ ಯಾವುದೇ ಚಿಂತೆ ಇಲ್ಲದವರಂಥೇ ನಿದ್ದೆ ಆವರಿಸಿರುತ್ತದೆ. ಬೆಳಗ್ಗೆ ಯಾರಾದ್ರೂ ಮುಸುಕು ಹೊದ್ದು ಮಲಗಿದವನನ್ನು  ಎಚ್ಚರಿಸಿದಾಗ ಎದುರಿನವರ ಕೆನ್ನೆಯ ಮೇಲೆ ಬಿಟ್ಟಿಯಾಗಿ ಬಾಸುಂಡೆ ಮೂಡಿಸುವಷ್ಟು ಸಿಟ್ಟು ಬರುತ್ತದೆ. ಅಲ್ರೀ ನೀವೆ ಹೇಳ್ರೀ... ಬೆಳಗ್ಗಿನ ಜಾವದಲ್ಲಿ ದೀಪಿಕಾ ಪಡುಕೋಣೆ ನಮ್ಮ ಜೊತೆ “ಚಾಟ್‍ಮಸಾಲ” ತಿನ್ನುವಾಗ ಯಾರಾದ್ರೂ ಡಿಸ್ಟರ್ಬ್ ಮಾಡಿದರೆ ನಿಮಗೂ ಸಿಟ್ಟು ಬರಲ್ವಾ..? ತಿಳಿನೀಲಿ ಕಂಗಳ ಹುಡುಗಿಯ ನೆನೆದು ಪೋಲಿ ಕನಸು ಕಾಣುತ್ತಾ ಅವಳ ಹತ್ತಿರ ಹೋಗಿ ಮುತ್ತನ್ನು ಕೊಡುವ ಸಮಯದಲ್ಲಿ ಮೈ ಮೇಲೆ ತಣ್ಣಿರು ಸುರಿದರೆ ಎಬ್ಬಿಸಿದವರನ್ನು ಜಾಡಿಸಿ ಒದೆಯುವಷ್ಟು ಸಿಟ್ಟು ಬರಲ್ವಾ..? ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿದ್ರೆ ಪರ್ಸನಾಲಿಟಿ ಚನ್ನಾಗಿ ಇರುತ್ತೆ ಅಂತ ಅದೇಷ್ಟೂ ಜನ ನಂಗೆ ತಲೆತಿನ್ನುತ್ತಿದ್ದರು. ನಾನೇನೊ ಜಾಂಗಿಗ್ ಮಾಡಲು ಆಸೆ. ಆದ್ರೆ ತಕರಾರು ಇರೋದು ನಸುಕಿನ ಜಾವ 5 ಗಂಟೆಗೆ ಏಳೋದು. ಸ್ವಾಮಿ ವಿವೇಕಾನಂದರು ನಮ್ಮಂತ ಸೂರ್ಯಪುತ್ರರಿಗೆ ದೇಶವನ್ನು ಮುನ್ನಡೆಯುವದಕ್ಕೊಸ್ಕರ  “ಏಳಿ ಎದ್ದೇಳಿ’ ಅಂತ ಸಿಂಹಘರ್ಜನೆ ಮಾಡಿದ್ದಾರೆ. ಎಷ್ಟು ಗಂಟೆಗೆ ಏಳಬೇಕು ಎಂದು ಹೇಳಿಲ್ಲ

ಚಂದಿರನಲ್ಲದೇ ನಿನಗೇನು ಕೊಡಲಿ ನಾನು..!

ಅವಳು, ಆಕೆ ಬಳಕಿದರೆ ಬಾತುಕೋಳಿಯ ಮೈಯವಳು, ದುಂಡುಮುಖ, ಗಿಣಿಯನ್ನು ನಾಚಿಸುವ ಮೂಗು, ಗಾಳಿ ಬೆಳಕನ್ನುಂಡು ಉಬ್ಬಿಕೊಂಡ ಗಲ್ಲಗಳು, ಅರಳಿ ನಿಶ್ಚಲವಾಗಿ ಕಾಡಿಸುವ ಮುಗ್ಧ ಕಣ್ಣುಗಳು, ಅಲ್ಲಲಿ ಇಳಿಬಿದ್ದಿರುವ ಮುಂಗುರುಳಿನವಳು, ಹೃದಯಕ್ಕೆ ಬೆಂಕಿ ಹಚ್ಚಿ ಮಾಯವಾಗುವ ಪ್ರೇಮಲೋಕದ ರಾಜಕುಮಾರಿಯಂತವಳು, ಬರಗಾಲ ಬಿದ್ದ ನೆಲಕ್ಕೆ ತಂಪೆರೆಯುವ ಮಳೆ ಸುರಿದವಳು, ಮಿನಾಕ್ಷೀ ಚೌಕ್‍ನ ಪ್ರತಿಯೊಂದು ಕಲ್ಲುಕಲ್ಲಿನಲ್ಲಿಯೂ ಕಾಣಿಸಿದವಳು, ಕಾಡಿಸಿದವಳು, ಹೃದಯಕ್ಕೆ ತೂತು ಕೊರೆದವಳು, ಕ್ಲಾಸ್‍ಲ್ಲಿ ಜುಮುಕಿಗಳನ್ನು ಅಲುಗಾಡಿಸುತ್ತಾ, ಕಾಲ್ಗೆಜ್ಜೆಯ ಸದ್ದುಮಾಡುತ್ತಾ ನಡೆದಾಡುವ ನವಿಲಿನಂತವಳು, ಅದಕ್ಕೂ ಮೀರಿ ಧಿಮಾಕಿನ ರಾಣಿಯ ವಂಶದವಳು. ಅವಳಿಗೆ ನಾನು ಪ್ರೀತಿಯಿಂದ ಆಂಬ್ಯುಲೆನ್ಸ್ ಎಂದು ಕರೆಯುತ್ತಿದ್ದೆ. ಅದಕ್ಕೂ ಒಂದು ಕಾರಣವಿದೆ. ಕೋಚಿಂಗ್‍ಗೆ ಬಿಜಾಪೂರಕ್ಕೆ ಬಂದಾಗ ಗೋಲಬುಂಬಜ್‍ದ ಹಾಗೆ ನನ್ನನ್ನು ಸೆಳೆದವಳು ಅವಳು. ನನ್ನ ಹೃದಯದ ಪ್ರತಿ ಕೋಣೆಯಲ್ಲಿಯೂ ಅವಳ ನೆನಪು ಪ್ರತಿದ್ವನಿಸುತ್ತಿದೆ ಒಂದಲ್ಲಾ ಎಳೇಳು ಸಾರಿ...! ಕ್ಲಾಸ್‍ಲ್ಲಿ ಪ್ಯಾನಿಗಾಗಿ ನಡೆದ ಜಿದ್ದಾಟದಲ್ಲಿ ಗೆದ್ದವಳು ನೀನಲ್ಲವೇ ನನ್ನವಳು. ಅವಳ ಗೆಲ್ಲುವ ಹಠಮಾರಿತನಕ್ಕೆ ಸೋತು ಹೋದ ಹುಚ್ಚು ಪೋರ ನಾನು. ಅವಳ ಒಂದು ನಗುವಿಗಾಗಿ, ವಾರೆಗಣ್ಣಿನ ನೋಟಕ್ಕಾಗಿ, ಕೈಬೆರುಳುಗಳ ಉಂಗುರಗಳ ದರ್ಶನಕ್ಕಾಗಿ, ಇತಿಹಾಸದ ಪೀರಿಯಡ್‍ಲ್ಲಿಯೂ ವಾಕರಿಕೆ ತರುವಷ್ಟು ಭವಿಷತ್‍ಕಾಲದ ಕನಸು ಕಾಣುತ್ತಿದ್ದವನು ನ