ವಿಷಯಕ್ಕೆ ಹೋಗಿ

ಬಾ ಮಳೆಯೆ ಬಾ....









ಮೂರುಸಂಜೆ ಸಮಯ. ಭೂಮಿಯನ್ನು ಅಪ್ಪಿ ತಬ್ಬಿಕೊಳ್ಳಲು ಮಳೆ ಹನಿಗಳು ಪೈಪೋಟಿಗೆ ಬಿದ್ದಂತೆ ತಾಮುಂದು ನಿಮುಂದು ಎಂದು ಧರಣಿಯ ಕೆನ್ನೆಗೆ ಮುತ್ತಿಕ್ಕುತ್ತವೆ. ಕಾದು ಸುಡುವ ಹಂಚಾಗಿದ್ದ ಭೂಮಿಗೆ ತಣ್ಣನೆಯ ಬಟ್ಟೆಯನ್ನು ಹೊದಿಸಿದ ಅನುಭವ. ಊರ ತುಂಬ ಪಸರಿಸಿದ ಮಣ್ಣ ಸುವಾಸನೆಗೆ ಪಾರಿಜಾತದ ಘಮವು ಸಪ್ಪೆಯಾಗಿದೆ.
ಯಾವ ಸೀಮೆಯ, ಯಾವ ಊರಿನ, ಯಾವ ಕೇರಿಯ ನೀರು ಆವಿಯಾಗಿ, ಹೆಪ್ಪುಗಟ್ಟಿ, ಮೋಡವಾಗಿ ಕರಗಿ ನೀರಾಗಿ ಪರಿಚಯವಿಲ್ಲದ ಜಾಗದಲ್ಲಿ ನಾಚಿಕೆ ಪಟ್ಟುಕೊಳ್ಳದೆ ಜಂಬವಿಲ್ಲದೆ ಸುರಿಯುವ ಅಮೃತಘಳಿಗೆಗೆ ಮಣ್ಣಿನೊಳಗೆ ಅಡಗಿ ಕುಳಿತ ಬೀಜ, ಸಸಿ, ಬೇರು ಬಾಯ್ತೆರೆದು ನಿಂತಿರುತ್ತದೆ ತುದಿಗಾಲ ಮೇಲೆ ಬೊಗಸೆಗಣನ್ನನ್ನು ಅರಳಿಸುತ್ತಾ.
ಅಲ್ಲೆಲ್ಲೂ ಅಣಬೆಗಳು ಹಿಡಿಮಳೆಗೆ ಭೂಮಿ ನೆನೆಯುವದನ್ನು ತಪ್ಪಿಸಲು ಕ್ಷಣಮಾತ್ರದಲ್ಲಿ ಹೂವಾಗಿ ಅರಳಿ ನಿಲ್ಲುತ್ತವೆ ಹಬ್ಬದ ಛತ್ರಿ ಚಾಮರ ಕಂಡಂತೆ. ಪುಟುಪುಟು ನೆಗೆಯುತ್ತಾ ಓಡಾಡುವ ಕಪ್ಪೆಮರಿಗಳ ಆಟ ಪುಟ್‍ಬಾಲ್ ಆಟ ನೋಡುವಷ್ಟೇ ಮಜಭೂತವಾಗಿರುತ್ತದೆ.
ದೇವರ ಆಟ ಬಲ್ಲವರ್ಯಾರು? ಹಸಿದು ಬರಗೆಟ್ಟ ಗಿಡಗಳು ಹಸಿರಾಗಲೂ ಜಡಿಮಳೆ ಬಸಿರಾಗುವಂತೆ ಮಾಡುತ್ತದೆ. ಎಲೆಯುದರಿ ಮುದುಡಿಕೊಂಡ ಗಿಡಗಳು ಮೆಲ್ಲನೆ ಮೈ ಕೊಡವಿಕೊಂಡು ಹಣ್ಣಾದ ಹಳದಿ ಎಲೆಗಳನ್ನು ಉದುರಿಸಿ ಚಿಗುರೆಲೆಗೆ ಜಾಗ ಮಾಡಿಕೊಡುತ್ತದೆ. ಮೆಲ್ಲಗೆ ಹೂವೊಂದು ಗರ್ಭದಿಂದ ಹೊರಬಂದು ನಗುತ್ತಾ ನಾಚಿ ನೀರಾಗುತ್ತದೆ ದುಂಬಿ ಬಂದು ಕುಳಿತಾಗ.
ಕೊಟ್ಟಿಗೆಯಲ್ಲಿ ಧೂಳು ಬಡಿದುಕೊಂಡ ನೇಗಿಲು, ಬಾರುಕೋಲು, ಕೆಲಸವಿಲ್ಲದೆ ಮಲಗಿದ್ದ ರಾಮ-ಲಕ್ಷ್ಮಣ ಹೆಸರಿನ ಎತ್ತುಗಳು ತಯಾರಾಗಿ ನಿಲ್ಲುತ್ತವೆ ಭೂಮಿಯ ಉದರಕ್ಕೆ ಕಾಳು ಹರಡಲು. ಕಾಳು ಬಸಿರೊಡೆದು ಸಸಿಯಾಗಲು ಜಡಿದು ಬರುವ ಮಳೆ ನೆರವಾಗಲು ಹವಣಿಸುತ್ತದೆ.
ಮಳೆ ಅಂದ್ರೆ ಎಲ್ಲರಿಗೂ ಇಷ್ಟ.
ನನಗೂ....
ಹೃದಯಕ್ಕೆ ಬರಗಾಲ ಬಿದ್ದ ಸಮಯದಲ್ಲಿ ಸುರಿದ ಸೊನೆಮಳೆಯೊಂದಿಗೆ ಮುನಿಸಿಕೊಳ್ಳುತ್ತಲೆ, ಅಪ್ಪಿಕೊಳ್ಳುತ್ತಾ, ಮುದ್ದಾಡುತ್ತಾ, ತನುಮನವನ್ನು ಅರ್ಪಿಸಿಕೊಳ್ಳಲು ತುದಿಗಾಲ ಮೇಲೆ ನಿಂತ ಸಮಯ. ನೋಡನೋಡುತ್ತಲೆ ಸುರಿದ ಮಳೆಗೆ ಮೈಯೊಡ್ಡಿ ಆಲಿಕಲ್ಲುಗಳನ್ನು ಬೊಗಸೆಗಟ್ಟಲೆ ಹೆಕ್ಕಿ ನನ್ನವಳಿಗೆ ಕೊಡುತ್ತಿದ್ದ ದಿನಗಳಿಗೆ ಕಾತರಿಸುತಿದ್ದ ಸಮಯದಲ್ಲಿ ಬಿರುಸಾಗಿ ಸುರಿದ ಮಳೆಯಲ್ಲಿ ಪುಟ್ಟಪೊರನಂತೆ ಅಲೆದಾಡಿ ಶೀತ,ಜ್ವರ ಬಂದು ಅಪ್ಪನ ಕೈಲಿ ಹೊಡೆಸಿಕೊಂಡ ಆ ದಿನಗಳು ನಿಜಕ್ಕೂ ಚಂದ.
ಹಿತ್ತಲ ಮನೆಯ ಬಾಗಿಲಿಂದ ತಪ್ಪಿಸಿಕೊಂಡು ‘ಬಾರೋ ಬಾರೋ ಮಳೆರಾಯ’ ಹಾಡನ್ನು ಗುನುಗುತ್ತಾ ನೆನೆದು ಒಬ್ಬರಿಗೊಬ್ಬರು ‘ಸಕ್ಕಸ್‍ಸುರಗಿ’ ಆಟವಾಡುವಾಗ ಶಾಲೆಯಲ್ಲಿ ಕೊಟ್ಟ ಹೋಂವರ್ಕ್, ಮನೆ ಯಾವುದು ನೆನಪಾಗುತ್ತಿರಲಿಲ್ಲ. ಎಲ್ಲಿಂದಲೋ ಬಂದ ಅವ್ವ ಬೆನ್ನಿಗೆ ಗುದ್ದಿದ ಮೇಲೆಯೇ ಮಳೆಯಾಟ ಬಂದ್...! ಅವತ್ತು ಮನೆಯಲ್ಲಿ ಬರೀ ಬೈಗುಳಗಳ ಮಳೆ..!
ಮೂಲೆ ಸೇರಿ ಏಕಾಂಗಿಯಾಗಿ ಬಸವಳಿದು ಬಿದ್ದ ಕೊಡೆಯೊಂದು ಹೂವಿನಂತೆ ಅರಳಿ ನಿಲ್ಲಲು ಮಳೆ ಬೇಕೆಬೇಕು. ಅಲ್ಲಲ್ಲಿ ತೂತುಬಿದ್ದು ಹಾಳಾಗಿದ್ದರೆ ಕೆಂಪು ಬಟ್ಟೆಯ ತುಣುಕಿನಿಂದ ಹೊಲಿಗೆ ಹಾಕಿದಾಗ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ. ಅಜ್ಜನ ಸಂಗಾತಿಯಾಗಿರುವ ಛತ್ರಿಯಂತೂ ದುರಸ್ತಿಯಿಂದ ಕೂಡಿ ಕೋಲಿನ ಕೆಲಸಕ್ಕೆ ರಾಜಿನಾಮೆ ನೀಡಲು ರೆಡಿಯಾಗುತ್ತದೆ. ತಲೆಗೊಂದರಂತೆ ಕೊಡೆ ಕೊಳ್ಳಲು ಚಿಕ್ಕಪ್ಪ ಶನಿವಾರದ ಸಂತೆಗೆ ಹಾಜರಾಗುತ್ತಾನೆ. ಸುರಿಯುವ ಮೊಂಡು ಮಳೆಯಲ್ಲಿ ಕೊಡೆ ಹಿಡಿದುಕೊಂಡು.
ಮಳೆಯ ಸಂಗಡ ಹರಿದು ಬಂದ ನೀರು ಹಳ್ಳದಲ್ಲಿ ಕೂಡಿ, ನದಿಯಾಗಿ, ಸಾಗರದಲ್ಲಿ ಲೀನವಾಗಿ ಆವಿಯಾಗಿ ಮತ್ತೆ ಭೂಮಿಗೆ ಬರಲು ತುದಿಗಾಲಿನಲ್ಲಿ ನಿಂತಿರುತ್ತದೆ.
ಮಳೆ ಯಾರಿಗೆ ಯಾಕೆ ಇಷ್ಟ :
ಚಿಕ್ಕಮಕ್ಕಳಿಗೆ :
 ಸುರಿಯುವ ಸೋನೆ ಮಳೆಯಲ್ಲಿ ನೆನೆಯುವ ಆಸೆ. ನೀಲಿ, ಕೆಂಪು, ಹಸಿರು ನಾನಾ ತರಹದ ಬಣ್ಣ ಬಣ್ಣದ ಹಾಳೆಗಳಿಂದ ಕಾಗದದ ದೋಣಿಗಳನ್ನು ತೇಲಿಬಿಡುವ ಆಸೆ. ಮನೆಯ ಮಾಳಿಗೆಯ ಕಿಂಡಿಯಲ್ಲಿ ಸುರಿಯುವ ರಭಸದ ನೀರಿಗೆ ಬರೀ ಬತ್ತಲೆಯಾಗಿ ಮೈಯೊಡ್ಡುವ ಆಸೆ. ಮೊಣಕಾಲವರೆಗೂ ನಿಂತ ನೀರಿನ ಜೊತೆ ಚಲ್ಲಾಟವಾಡುವ ಆಸೆ. ಮರಳಿನ ಮೇಲೆ ಗುಬ್ಬಿಗೂಡು ಕಟ್ಟಿ ಚಂದದ ಪುಟ್ಟ ಆಣೆಕಟ್ಟು ಕಟ್ಟಿ ಎಲ್ಲಿಂದಲೂ ಹಿಡಿದು ತಂದೆ ಮಳೆಹುಳುವಿನ ಮರಿ, ಕಪ್ಪೆಮರಿ ತಂದು ಕಣ್ಣರಳಿಸಿ ನೋಡುವ ಆಸೆ. ಇದ್ಯಾವುದಕ್ಕೂ ಬಿಡದೆ ಕಾಡಿಸುವ ಅಪ್ಪನ ಮೇಲೆ ಆಗಾಗ ಉಚಿತವಾಗಿ ಸಿಟ್ಟಾಗುವ ಆಸೆ ಸಂದರ್ಭ ಒದಗುತ್ತದೆ.

ಇನ್ನು ಪ್ರೇಮಿಗಳಿಗೆ :
ನಲ್ಲೆಯ ಕಿರುಬೆರಳನ್ನು ಹಿಡಿದು ಸಾಲುಮರದ ದಾರಿಗುಂಟ ಮೈಚಳಿ ಬಿಟ್ಟು ಒಬ್ಬರಿಗೊಬ್ಬರು ಅಂಟಿಕೊಂಡು ಅಪ್ಪಿಕೊಂಡು ಮುತ್ತಿನ ಮಳೆ ಸುರಿಸುವ ಆಟ ಇಷ್ಟ. ದಾರಿಯಲ್ಲಿ ಸಿಗುವ ಗುಲ್‍ಮೊಹರ್ ಗಿಡದ ಕೆಳಗೆ ಕುಳಿತು ಕಣ್ಣಿನಲ್ಲಿ ಕಣ್ಣುಸೇರಿಸಿ ಮೌನವಾಗಿ ನೋಡುವಾಗ ದಡಲ್ ಎಂದು ಬಂದಪ್ಪಳಿಸಿದ ಸಿಡಿಲಿನ ಸದ್ದಿಗೆ ಒಬ್ಬರಿಗೊಬ್ಬರು ಅಪ್ಪಿಕೊಂಡು ಕಡೆಗೆ ನಾಚಿಕೆಯಿಂದ ನಕ್ಕು ಸುಮ್ಮನಾಗುವ ಆಟ ಇಷ್ಟ. ಹಾದಿಗುಂಟ ನಡೆಯುವಾಗ ಕೆಂಪು ಬಣ್ಣದ ಕೊಡೆಯನ್ನು ತಿರುಗಿಸುತ್ತಾ ಹನಿಗಳ ಜೊತೆ ಚಲ್ಲಾಟವಾಡುವ ಆಟ ಇಷ್ಟ. ಮಳೆಯಿಂದ ನೆನೆದು ಚಳಿಯಾಗಿ ಬಿಸಿಯುಸಿರ ಬಯಕೆ ಕಟ್ಟೆಯೊಡೆಯುವ ಸಮಯದಲ್ಲಿ ಜಗದ ಪರಿವೆಯಿಲ್ಲದೆ ಒಂದಾಗುವ ಆಟದಲ್ಲಿ ದೂರದಲ್ಲೆಲ್ಲೂ ಅಣಕಿ ನೋಡುವ ಕಾಮನಬಿಲ್ಲನ್ನು ಮರೆತು ಬಣ್ಣಬಣ್ಣಗಳ ಭಾವದಲ್ಲಿ ಮಿಂದು ಬೆಚ್ಚಗಾಗುವ ಆಸೆ.

ದೊಡ್ಡವರಿಗೆ :
ಮಳೆಸುರಿಯುವಾಗ ಬಿಸಿಬಿಸಿ ಗರಿಗರಿ ಹಪ್ಪಳ,ಸಂಡಿಗೆ ಮಾಡಿ ಮಕ್ಕಳಿಗೆ ಉಣಬಡಿಸುವದಾಸೆ. ತುಟಿ ಸುಡುವ ಚಹಾ ಕುಡಿಯುವ ಆಸೆ. ಬಿಡದೆ ಧೋ ಎಂದು ಸುರಿಯುವ ಮಳೆಗೆ ಮನೆಯ ಹೆಂಚು ಸರಿಮಾಡಿಕೊಂಡು ಮನೆಯನ್ನು ಬೆಚ್ಚಗಾಗಿ ಇಡುವ ಕೆಲಸ. ಹಿತ್ತಲಿನಲ್ಲಿನ ಕಟ್ಟಿಗೆಗಳು ನೆನೆಯದಂತೆ ಇಡಲು ತೆಂಗಿನ ಗರಿಗಳನ್ನು ಜೋಡಿಸುವ ಎಡೆಬಿಡೆಯಿಲ್ಲದ ಕೆಲಸ. ಅಕ್ಕನಿಗಂತು ತನ್ನ ಜರತಾರಿ ಲಂಗಗಳನ್ನು ಒಣಗಿಸುವದು ಹೇಗೆ ಎಂಬ ಚಿಂತೆ ಕಾಡತೊಡುತ್ತದೆ.

 “ ಓ ಮಳೆಯೇ, ನನಗೊಂದು ಆಸೆ ಈಡೇರಿಸುವೆಯಾ...? ನಾನು ಏಕಾಂತದಲ್ಲಿರುವಾಗ ಸುರಿ. ನನ್ನವಳಿಲ್ಲದೆ ಬೇಜಾರಾಗಿ ಕುಳಿತ ಸಮಯದಲ್ಲಿ. ಮತ್ತೆ ನಿನ್ನೊಂದಿಗೆ ಆಟವಾಡುವ ಆಸೆಯಾಗಿದೆ. ಎಷ್ಟೆಂದರೆ ನಾನು ಮನೆ, ಪೋಲಿ ಗೆಳೆಯರ ಬಳಗ, ಕಾಡಿಸುವ ಅಕ್ಕ, ಜಗಳಗಂಟ ತಮ್ಮ, ಜಾತಿಗೀತಿ, ಕೆಲಸದ ಒತ್ತಡ, ದುಡ್ಡು, ಸ್ವಾರ್ಥ ಎಲ್ಲವನ್ನು ಬಿಟ್ಟು ಅಷ್ಟೇ ಅಲ್ಲ ಹೃದಯವನ್ನು ಚೂಟಿ ಮರೆಯಾಗುವ ಗೆಳತಿಯನ್ನು ಮರೆತು ನಿನ್ನೊಂದಿಗೆ, ಕೇವಲ ನಿನ್ನೊಂದಿಗೆ ಬರೀ ಮೈಯಲ್ಲಿ ಲೋಕದ ಯಾವ ಭವಬಂಧನಗಳ ಹಂಗಿಲ್ಲದೆ ಆಟವಾಡಬೇಕಾಗಿದೆ”
ಬಾ ಮಳೆಯೆ ಬಾ....
ಲೇಖನ : ಸಂಗಮೇಶ ಡಿಗ್ಗಿ ಸಂಗಾಮಿತ್ರ
8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾನವ ಘನತೆಯ ಪ್ರತಿಪಾದಕ: ಬಿಜವಾಡ ವಿಲ್ಸನ್

 ಮಲಹೊರುವ ಪದ್ದತಿ ತನ್ನ ಕುಲ ಕಸುಬು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನೋರ್ವ ತನ್ನ ದೃಡ ನಿರ್ಧಾರದಿಂದ ದೇಶಾದ್ಯಂತ ಮಲ ಹೊರುವ ಅಮಾನವೀಯ ಪದ್ಧತಿ ವಿರುದ್ಧ ಜನಾಂದೋಲನ ರೂಪಿಸಿ ಮಾನವ ಘನತೆಯ ಬದುಕು (ಡಿಗ್ನಿಟಿ ಆಪ್ ಲೈಪ್)ನ್ನು ತನ್ನ ಹೋರಾಟದ ಮೂಲಕ ಎತ್ತಿ ಹಿಡಿದ ಉದ್ದೇಶಕ್ಕಾಗಿ 2016ನೇ ಸಾಲಿನ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ಅವರ ಹೆಸರು ಕೋಲಾರ ಜಿಲ್ಲೆಯ ಕೆಜಿಎಪ್ ಮೂಲದ ಬಿಜವಾಡ ವಿಲ್ಸನ್. ಆಂದ್ರದ ಓಂಗೋಲ್ ಜಿಲ್ಲೆಯ ಕಂಬಾಲದೇನು ಗ್ರಾಮದ ಬಿಜವಾಡ ಜಾಕೋಬ್ ಎಂಬುವವರು 1935ರ ಸಂದರ್ಭದಲ್ಲಿ ಕೆಜಿಎಪ್‌ಗೆ ಆಗಮಿಸಿ ಇಲ್ಲಿನ ಬಿಜಿಎಂಎಲ್ ಕಾರ್ಖಾನೆಯಲ್ಲಿ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. 1966ರಲ್ಲಿ ವಿಲ್ಸನ್ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೆರೆಯ ಕುಪ್ಪಂನಲ್ಲಿ ನೆರವೇರಿಸಿದ ವಿಲ್ಸನ್ ಕೆಜಿಎಪ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ತದಂತರ ಹೈದರಾಬಾದ್ ವಿವಿಯಲ್ಲಿ ರಾಜಕೀಯ ಶಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಲಹೊರುವ ಕುಲ ಕಸುಬು ತನ್ನ ಕೊನೆಯ ಮಗನಿಗೆ ತಟ್ಟದಿರಲಿ ಎಂಬ ಕಾರಣಕ್ಕೆ ವಿಲ್ಸನ್ ಅವರನ್ನು ಕುಪ್ಪಂನ ವಿದ್ಯಾರ್ಥಿ ನಿಲಯದಲ್ಲಿ ಸೇರಿಸಿ ಶಿಕ್ಷಣ ಕೊಡಿಸಿದ್ದೇ ಪಾಲಕರ ಮಹತ್ಸಾಧನೆಯಾಗಿತ್ತು. ಮಲ ಹೊರುವ ಸಮುದಾಯದವ ಎಂಬ ಕಾರಣಕ್ಕೆ ಸಹ ಪಾಠಿಗಳಿಂದ ಅವಮಾನಕೊಳಗಾಗಿದ್ದ ವಿಲ್ಸನ್ ಇದಕ್ಕೆ ಕಾರಣ ಹುಡುಕಲು ಹೊರಟಾಗ ಪಾಲಕರು ಸತ್ಯ ಮರೆಮ...

ಮೊಸರು ಮಾರುವ ಹುಡುಗನ ಸೈಕಲ್ ಮತ್ತು ಪ್ಲಾಶ್‍ಬ್ಯಾಕ್ ನೆನಪು

‘ಕಾಲನ ಕೈಗೆ ದೇವರು ಸೃಷ್ಟಿ ಮಾಡಿದ ಜಗತ್ತು ಉಳಿಯುವದಿಲ್ಲವೆಂದ ಮೇಲೆ ನಾವು ಯಾವ ಲೆಕ್ಕ’ ಏಲ್ಲೋ ಓದಿದ ಅಣಿಮುತ್ತು ಮೊನ್ನೆ ದುತ್ತನೆ ಮೆದುಳಿನಲ್ಲಿ ಗುಂಗಿ ಹುಳದಂತೆ ಕಾಡತೊಡಗಿತು. ಕಾರಣವಿಷ್ಟೇ, ಎಮ್.ಎ ಮುಗಿಯುವ ಸಮಯವೂ ಹೌದು, ಅದಕ್ಕಿಂತ ಮುಖ್ಯವಾಗಿ “ಆನಂದಮಾರ್ಗ ಆಶ್ರಮ” ತೊರೆಯಬೇಕಲ್ಲ ಎನ್ನುವ ನೋವು. ಆ ನೋವಿಗೆ ಕಾರಣವಾದವನು ದಿನಾಲೂ ಗಟ್ಟಿ ಕೆನೆ ‘ಮೊಸರು ಮಾರುವ ಹುಡುಗ’ ಮತ್ತು ಆತನ ‘ಸೈಕಲ್’. ಆ ಹುಡುಗ 7ನೇ ತರಗತಿ. ಯಲ್ಲಪ್ಪ ಮನ್ಸೂರ. ಸುಮಾರು 3 ಕಿ.ಮಿ ಸೈಕಲ್ ತುಳಿದು ಮೊಸರು ಮಾರುವ ಕಾಯಕ ಮಾಡುತ್ತಾನೆ. ಅದಕ್ಕಿಂತ ಹೆಚ್ಚಾಗಿ ಮುಂಜಾನೆಯ ಎಳೆ ಬಿಸಿಲಿನಲ್ಲಿ ಮಲಗಿದ್ದ ಹಾಸಿಗೆ ಹೊದ್ದು ಮಲಗಿದ್ದ ನನಗೆ ಎಚ್ಚರಿಸುವ ಅಲರಾಂ ಬೆಲ್ ಎಂತಲೇ ಹೇಳಬಹುದು. ಅವನ ಸೈಕಲ್ ಮಾಯಲೋಕದ ಕಿನ್ನರರು ತಮ್ಮ ವಾಹನಗಳಿಗೆ ಶೃಂಗಾರ ಮಾಡಿದಂತೆ ಗಾಲಿಗಳಿಗೆ ರಿಬ್ಬನ್ ಸುತ್ತಿ, ಯುದ್ಧಕ್ಕೆ ಸಿದ್ಧನಾಗಿದ್ದೆನೆ ಎನ್ನುವ ರೀತಿ ಭಾವುಟ ತೋರಿಸಿ, ಗೆಂಡೆಗಳನ್ನು ಗಾಳಿಗೆ ಹಾರಾಡಿಸುತ್ತಾ ಗಂಟೆ ಬಾರಿಸುವ ಗತ್ತು ನನ್ನನ್ನು ಬಾಲ್ಯದ ಪ್ಲಾಶ್‍ಬ್ಯಾಕ್‍ಗೆ ಕರೆದೊಯ್ಯುವಂತೆ ಮಾಡಿತ್ತು. ತೂತು ಬಿದ್ದು ಪುಕ್ಸಟ್ಟೆ ಅಂಡು ಕಾಣಿಸುವ ದೊಗಳೆ ಚಡ್ಡಿ ಹಾಕಿಕೊಳ್ಳುತ್ತಿದ್ದ ವಯಸ್ಸಿನ ಹುಡುಗ ನಾನಾಗಿದ್ದೆ. ‘ಮೊದ ಮೊದಲು ಕೊಂಡ ಹೀರೋ ಸೈಕಲ್’ ಎಂಬತೆ ಪುಟ್ಟ ಸೈಕಲ್ ನಮ್ಮ ಮನೆಯ ಅಂಗಳವನ್ನು ಅಲಂಕರಿಸಿತ್ತು. ಇಡೀ ಊರಿಗೆ ಮೊದಲ ಸೈಕಲ್. ಊರಿನ ಜನ ಬಂದು ಅದನ್ನು ಮೈಸೂರ...

ಚಂದಿರನಲ್ಲದೇ ನಿನಗೇನು ಕೊಡಲಿ ನಾನು..!

ಅವಳು, ಆಕೆ ಬಳಕಿದರೆ ಬಾತುಕೋಳಿಯ ಮೈಯವಳು, ದುಂಡುಮುಖ, ಗಿಣಿಯನ್ನು ನಾಚಿಸುವ ಮೂಗು, ಗಾಳಿ ಬೆಳಕನ್ನುಂಡು ಉಬ್ಬಿಕೊಂಡ ಗಲ್ಲಗಳು, ಅರಳಿ ನಿಶ್ಚಲವಾಗಿ ಕಾಡಿಸುವ ಮುಗ್ಧ ಕಣ್ಣುಗಳು, ಅಲ್ಲಲಿ ಇಳಿಬಿದ್ದಿರುವ ಮುಂಗುರುಳಿನವಳು, ಹೃದಯಕ್ಕೆ ಬೆಂಕಿ ಹಚ್ಚಿ ಮಾಯವಾಗುವ ಪ್ರೇಮಲೋಕದ ರಾಜಕುಮಾರಿಯಂತವಳು, ಬರಗಾಲ ಬಿದ್ದ ನೆಲಕ್ಕೆ ತಂಪೆರೆಯುವ ಮಳೆ ಸುರಿದವಳು, ಮಿನಾಕ್ಷೀ ಚೌಕ್‍ನ ಪ್ರತಿಯೊಂದು ಕಲ್ಲುಕಲ್ಲಿನಲ್ಲಿಯೂ ಕಾಣಿಸಿದವಳು, ಕಾಡಿಸಿದವಳು, ಹೃದಯಕ್ಕೆ ತೂತು ಕೊರೆದವಳು, ಕ್ಲಾಸ್‍ಲ್ಲಿ ಜುಮುಕಿಗಳನ್ನು ಅಲುಗಾಡಿಸುತ್ತಾ, ಕಾಲ್ಗೆಜ್ಜೆಯ ಸದ್ದುಮಾಡುತ್ತಾ ನಡೆದಾಡುವ ನವಿಲಿನಂತವಳು, ಅದಕ್ಕೂ ಮೀರಿ ಧಿಮಾಕಿನ ರಾಣಿಯ ವಂಶದವಳು. ಅವಳಿಗೆ ನಾನು ಪ್ರೀತಿಯಿಂದ ಆಂಬ್ಯುಲೆನ್ಸ್ ಎಂದು ಕರೆಯುತ್ತಿದ್ದೆ. ಅದಕ್ಕೂ ಒಂದು ಕಾರಣವಿದೆ. ಕೋಚಿಂಗ್‍ಗೆ ಬಿಜಾಪೂರಕ್ಕೆ ಬಂದಾಗ ಗೋಲಬುಂಬಜ್‍ದ ಹಾಗೆ ನನ್ನನ್ನು ಸೆಳೆದವಳು ಅವಳು. ನನ್ನ ಹೃದಯದ ಪ್ರತಿ ಕೋಣೆಯಲ್ಲಿಯೂ ಅವಳ ನೆನಪು ಪ್ರತಿದ್ವನಿಸುತ್ತಿದೆ ಒಂದಲ್ಲಾ ಎಳೇಳು ಸಾರಿ...! ಕ್ಲಾಸ್‍ಲ್ಲಿ ಪ್ಯಾನಿಗಾಗಿ ನಡೆದ ಜಿದ್ದಾಟದಲ್ಲಿ ಗೆದ್ದವಳು ನೀನಲ್ಲವೇ ನನ್ನವಳು. ಅವಳ ಗೆಲ್ಲುವ ಹಠಮಾರಿತನಕ್ಕೆ ಸೋತು ಹೋದ ಹುಚ್ಚು ಪೋರ ನಾನು. ಅವಳ ಒಂದು ನಗುವಿಗಾಗಿ, ವಾರೆಗಣ್ಣಿನ ನೋಟಕ್ಕಾಗಿ, ಕೈಬೆರುಳುಗಳ ಉಂಗುರಗಳ ದರ್ಶನಕ್ಕಾಗಿ, ಇತಿಹಾಸದ ಪೀರಿಯಡ್‍ಲ್ಲಿಯೂ ವಾಕರಿಕೆ ತರುವಷ್ಟು ಭವಿಷತ್‍ಕಾಲದ ಕನಸು ಕಾಣುತ್ತಿದ್ದವನು ನ...