ವಿಷಯಕ್ಕೆ ಹೋಗಿ

ವಂಕ ಮೂತಿ ಹನುಮಪ್ಪನ ಸಂಕಟ


‘ದೇವ್ರೇ ನನ್ ಹುಡುಗಿ ಬಂದಾಳ, ಅವ್ಳು ನೋಡಾಕ ಸನ್ನಿಲಿಯೋಲ್ ತರಾ ಅಲ್ಲದಿದ್ರೂ ಒಂದ್ ರೆಂಜಿಗೆ ರಮ್ಯಾ, ಮಲ್ಲಿಕಾ ಶರಾವತ್ ಇದ್ದಾಂಗ ಅದಾಳಾ... ಅಕಿಗೆ ನಂಗ ಸೆಟ್ ಮಾಡಿದ್ರ ನಿಂಗ ಒಂದು ಕಾಯಿ ಒಡೀತೀನಿ’ ಅಂತ ಹುಡುಗನೊಬ್ಬ ಶನಿವಾರದ ಸಾಯಂಕಾಲದ ಸಮಯದಲ್ಲಿ ಒಂದೇ ಉಸುರಿಗೆ ಬೇಡಿಕೊಂಡ.
ಆ ದೇವರು ಬ್ಯಾರೆ ಯಾರು ಅಲ್ಲ. ವಾಮನಪುತ್ರ, ರಾಮನಭಕ್ತ, ಗುಡ್ಡವನೇತ್ತಿದ ಆಂಜನೇಯ, ಬ್ರಹ್ಮಾಂಡದಲ್ಲಿ ಮೊದಲಬಾರಿಗೆ ಸಿಕ್ಸ್‍ಪ್ಯಾಕ ಮಾಡಿಕೊಂಡ ಹನುಮಂತ, ನನ್ ಪಾಲಿಗೆ ವಂಕ ಮೂತಿ ಹನುಮ್ಯಾ..!
ವಂಕ ಮೂತಿ ಹನುಮ್ಯಾ ಮೊದಲಾ ಬ್ರಹ್ಮಚಾರಿ. ಅವನಿಗೆ ಹುಡುಗಿ ಸಿಗಲಾರದೆ ಮೂತಿ ಸಿಂಡರಿಸಿಕೊಂಡು ನಿಂತಲ್ಲೇ ನಿಂತು ಕಾಲು ನೊಯಿದರೂ ಪರವಾಗಿಲ್ಲ ಜಗವ ರಕ್ಷಿಸೋ ಪಣ ತೊಟ್ಟಿದ್ದಾನೆ. ಅಂತವನ ಎದುರು ಈ ಹುಡುಗಾ ಹುಡುಗಿ ಕೊಡು ಎಂದು ಎಟಿಎಮ್ ಮುಂದೆ ಡ್ರಾ ಮಾಡಿಕೋಳ್ಳುವ ರೀತಿ ಬೇಡ್ತಾ ಇದ್ದರೆ ಆ ದ್ಯಾವ್ರಿಗೆ ಹೊಟ್ಟ್ಯಾಗ ಖಾರ ಕಲಸಿದಂಗ ಆಗಲಾರದೆ ಇರಲಾರದು.
ಅದರಾಗ ಬ್ಯಾರೆ ಈ ಹುಡುಗ್ಯಾರು ನೀಲಿ,ಹಳದಿ,ಕೆಂಪು ಜಗಮಗಿಸೋ ಬಟ್ಟಿ ಹಾಕ್ಕೊಂಡು, ಇಡೀ ಊರಿಗೆ ಪುಗಸೆಟ್ಟೆ ಸೆಂಟ್ ವಾಸನೆ ಬಡಿಸುತ್ತಾ, ಮಲ್ಲಿಗೆ, ರೋಜ್, ಸೇವಂತಿ ಇತ್ಯಾದಿ ಮುಡಿದುಕೊಂಡು ಹನುಮಪ್ಪನ ಗುಡಿಗೆ ಬಂದ್ರ ಆ ದೇವರಿಗೆ ಟೆಂಪರೇಚರ್ ಬಂದು ಜ್ವರಾಗೀರಾ ಬರಾಂಗಿಲೇನು ಅನ್ನುವದು ನನ್ನ ಬಹುದೊಡ್ಡ ಬಿಡಿಸಲಾರದ ಗಣಿತ ಯಕ್ಷಪ್ರಶ್ನೆಯಾಗಿದೆ.
ಅವನಿಗೂ ಆಸೆ ಇರುತಲ್ವಾ..? ನನಗೂ ಸಂಸಾರ ಮಾಡೋಕೇ ಅಲ್ಲದಿದ್ದರೂ, ಅಟ್‍ಲಿಷ್ಟ್ ಒಂದು ಫಿಗರ್ ಆದ್ರೂ ಮೆಂಟೈನ್ ಮಾಡಬೇಕೆಂದು. ಆದರೆ ಸವ್ಯಸಾಚಿಯಾದ ಹನುಮಪ್ಪ ಎದುರಿಗೆ ದೀಪಿಕಾ ಪಡುಕೋಣೆ ನಿಂತರೂ ಸರಿಯೆ, ಬಾಜು ಮನೆ ಚಂದ್ರಕಲಾ ನಿಂತರೂ ಸರಿಯೇ ದಪ್ಪ ಕಣ್ಣು ಬಿಡಕೋತ ಅವರ ಆಸೆಗಳನ್ನು ಪೂರೈಸುತ್ತಾ ಮಹಾನ್ ‘ಗಾಡ್’ಫಾದರ್ ಎನಿಸಿಕೊಂಡಿದ್ದಾನೆ.
ಶನಿವಾರ ಬಂತ್ರದ್ರ ಸಾಕು ಈ ಪಡ್ಡೆ ಹೈಕಳಿಗೆ ಹನುಮಪ್ಪನ ಗುಡಿಯೇ ಕಾಲೇಜ್ ಕ್ಯಾಂಪಸ್ ಆಗಿ ಬದಲಾಗುತ್ತದೆ. ಬರುವ ಹುಡುಗರಿಗೆ, ಹುಡುಗಿಯರಿಗೆ, ಆಗ ತಾನೇ ಬಡ್ತಿ ಹೊಂದಿದ ಆಂಟಿಯರಿಗೆ ‘ಕಾಳು’ ಹಾಕಲು ರೆಡಿಯಾಗುತ್ತಾರೆ. ಇದ್ಯಾವುದರ ಅರಿವಿಲ್ಲದೇ ನನ್ನ ಪ್ರೀತಿಯ ಹನುಮ್ಯಾ ಆರ್ಶಿವದಿಸಿ ಪ್ರಸಾದ ನಿಡುತ್ತಾನೆ. ಅವನು ಮಾತ್ರ ‘ಉಪ್ಪಿನ’ ನೈವೀದ್ಯ’ ಸ್ವೀಕರಿಸಿ., ಭಕ್ತಾಧಿಗಳಿಗೆ ಸಿಹಿ ಬಾಳೆಹಣ್ಣು ನೀಡಿ ಸಂತಸ ಪಡುತ್ತಾನೆ.
ಆದರೆ ಅವನ ಸಂಕಟ ಕೇಳುವವರ್ಯಾರು..? ಎಲ್ಲಾ ದೇವರಿಗೂ ಎರಡೆರಡು ಹೆಂಡರೂ ಇರುವ ಹಾಗೇ ಅವನಿಗೆ ಒಂದಾದರೂ ಹೆಂಡ್ತಿ ಇರಬಾರದಾ.? ರಾಮ ತನ್ನ ಹೆಂಡರನ್ನು ಸಮುದ್ರದಿಂದ ಕರೆಸಿಕೊಳ್ಳಲಿ ಇವನನ್ನು ‘ಮೀಡೀಯೇಟರ್’ ಆಗಿ ಬಳಸಿಕೊಂಡ. ತನ್ನ ಸಂಸಾರವನ್ನು ಕಾಪಾಡಿದ ಅವನಿಗೆ ಒಂದು ಹುಡುಗಿಯನ್ನು ನೋಡಲಿಲ್ಲವಲ್ಲಾ ಇದು ಅನ್ಯಾಯವಲ್ಲೇದೇ ಮತ್ತೇನು..? ರಾಮನ ಜಾಗದಲ್ಲಿ ನಾನಿದ್ದರೆ ಅವನಿಗೆ ಒಂದು ಹುಡುಗಿಯನ್ನು ಗೊತ್ತು ಮಾಡಿ ಆಕಿ ಜೋತೆಗೆ ‘ಹನಿಮೂನ್’ಗೇ ಶ್ರೀಲಂಕಾಕ್ಕೆ ಕಳುಹಿಸುತ್ತಿದ್ದೆ..!
ಸುಮಾರು ವರ್ಷದಿಂದ ನಿಂತೇ ಇದ್ದರೂ ಅವನಿಗೆ ಯಾರಾದ್ರೂ ‘ಸ್ವಲ್ಪ ಕುರ್ಚಿ ಮ್ಯಾಗ ಕೂಡು’ ಅಂತ ಹೇಳಿಲ್ಲ. ಅವರ ಆಸೆ ಈಡೇರಿಸೋದಕ್ಕೆ ಹನುಮಪ್ಪ ಬೇಕು. ಆದ್ರ ಅವನ ಬಗ್ಗೆ ಕಾಳಜಿ ಮಾತ್ರ ಯಾರು ಮಾಡಂಗಿಲ್ಲ. ಅದು ಅನ್ಯಾಯದ ಪರಮಾವಧಿ ಅಲ್ಲದೇ ಮತ್ತೇನು ಅಲ್ಲ. ಪಾಪ ಅವನು ಸುಪ್ರೀಂಕೋರ್ಟ್‍ಗೆ ‘ಮಾನನಷ್ಟ ಮೊಕದ್ದೆಮೆ’ ಹೂಡಲು ಅವನಿಗೆ ಕಾನೂನು ಗೋತ್ತಿಲ್ಲ.
ಹುಡುಗಾ ಹುಡುಗಿ ಅವನ ಮುಂದ ಲವ್ ಸಕ್ಸಸ್ ಮಾಡಿದ್ರಾ ನಿಂಗೆ ತುಪ್ಪದ ದೀಪ ಹಚ್ಚತೀವಿ ಅಂತ ಅಂತಾರ. ಅವಂತ್ರೂ ತುಪ್ಪಾ ತಿಲ್ಲಾಕ ಎದ್ದು ಬಂದಿದ್ದು ನೋಡಿಲ್ಲ. ಬರೀ ಊದಿನಕಡ್ಡಿ ಹೋಗಿ ಮುಗನ್ಯಾಗ ತುಂಬಕೋತ ನಿಂತಾನ. ಹೋಗಿ ಮೂಗನ್ಯಾಗ ಹೊಕ್ರು ಒಂದು ದಿನಾನು ಸೀನಿಲ್ಲ, ಕೆಮ್ಮಿಲ್ಲ.
ಚಳ್ಯಾಗ ಮೈಮ್ಯಾಲ ತಣ್ಣೀರ ಸುರಿದು ಜಳಕಾ ಮಾಡಿಸಿದ್ರೂ ‘ಚಳಿ ಚಳಿ ತಾಳೆನು ಈ ಚಳಿಯ’ ಅಂತ ಹಾಡ ಹಾಡಿಲ್ಲ. ಕೆಂಪ ಟಾವೆಲ್ ಸುತ್ತುವಾಗ ಇದು ಬೋರು ಒಂದ್ ಜೀನ್ಸಪ್ಯಾಂಟ್ ಕೊಡ್ಸಿ ಅಂತ ಅಂಗಲಾಚಿಲ್ಲ. ಬಾಳ ಒಳ್ಳೆಯ ದೇವರು ಅಂವ.
ಬರೋ ಭಕ್ತಾಧಿಗಳೆಲ್ಲಾ ‘ಡಣ್ ಡಣ್’ ಅಂತ ಒಂದೇ ಸಮನೆ ಗಂಟೆ ಬಾರಿಸಿದ್ರೂ ಕಿರಿಕಿರಿಯಾಗ್ತದ, ಕಿವಿ ಕಿವುಡಾಗತ್ದಾದ ‘ಡೋಂಟ್ ಡಿಸ್ಟರ್ಬ್’ ಅಂತ ಬಯ್ದಿಲ್ಲ. ಪಾಪಾ ಅನಿಸುತ್ತೆ. ಆ ಪೂಜಾರಿ ಮಹಾಶಹ ಅವನ ಕಿವಿಯೊಳಗ ಹತ್ತಿಯಾದ್ರೂ ಇಡಬಾರಾದ.
ನಮ್ಮೂರಾಗಿನ ಹನುಮಪ್ಪನ ಮ್ಯಾಲ ನಾಯಿ ಸುಸು ಮಾಡಿದ್ರೂ ಅದಕ ಕಲ್ಲು ತಗೊಂಡು ಹೊಡೆದಿಲ್ಲ. ರಾತ್ರಿ ಲೈಟ್ ಹಚ್ರಿ ಬಿಡ್ರೀ ಸಂಬಂದಿಲ್ಲ. ಸೋಳ್ಳೆ ಕಡಿದು ಡೆಂಗ್ಯೂ, ಮಲೇರಿಯಾ ಬರತಾದ ಸೋಳ್ಳೆ ಕ್ವಾಯಿಲ್ ಹಚ್ಚು ಅಂತ ಪೂಜಾರಿಗೆ ರೆಕಮಂಡೆಶನ್ ಮಾಡಿಲ್ಲ. ಅದಕ ನನಗ ಹನುಮಪ್ಪ ನನ್ನ ಪ್ರೀತಿಯ ಹನುಮ್ಯಾ ಆಗಿದ್ದು.
ಪಾಪ ಹನುಮ್ಯಾ. ಅವನ ಹತ್ರ ಬರೋ ಹುಡುಗ್ಯಾರಿಗೆ ಪ್ರಪೋಸ್ ಮಾಡೊಕೆ ಬರಲಾರದಷ್ಟು ಮುಗ್ಧ ಮನುಷ್ಯಾ. ಎಸ್.ಎಂ.ಎಸ್ ಮಾಡೋಕು ಗೋತ್ತಿಲ್ಲ, ಕಣ್ಣು ಮಿಟುಕಿಸೋಕು ಗೋತ್ತಿಲ್ಲ, ಹಾಯ್ ಹಲೋ ಅನ್ನೊಕು ಭಯ. ಪೂಜಾರಿ ಅವನ ಎದರೆ ಮಧುವೆಯಾಗಿ ಒಂದು ವರ್ಷದೊಳಗೆ ತನ್ನ ಮಕ್ಕಳಿಗೆ ಅವನ ಎದುರೇ ನಾಮಕರಣ ಮಾಡುವಾಗ ಹನುಮಪ್ಪ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತಿರುತ್ತಾನೆ ‘ಬಂಗಾರದ ಮನುಷ್ಯ’ ಸಿನಿಮಾದ ರಾಜಕುಮಾರ ತರ ನಿಸ್ವಾರ್ಥಿಯಾಗಿ.
ಅವ ಶಾದಿ.ಕಾಮ್ ನ್ಯಾಗ ನನಗ ಒಂದು ಹುಡುಗಿ ಬೇಕು ಅಂತ ಪ್ರೋಪೈಲ್ ಕ್ರೀಯೇಟ್ ಮಾಡಿಲ್ಲ. ಪೇಸ್‍ಬುಕು ಗೀಸ್ಬುಕ್ಕು, ವಾಟ್ಸ್‍ಪ್, ಟ್ವಟರ್ ಇತ್ಯಾದಿಗಳ ಪರಿಚಯ ವಿಲ್ಲದ ಮಹಾ ಶತದಡ್ಡ ಎಂದರೆ ತಪ್ಪೇನು ಇಲ್ಲ.
ಅಮೀರಖಾನ್, ಶಾರುಕ್‍ಖಾನ್ ಬಿಟ್ಟಿರುವ ಸಿಕ್ಸ್‍ಪ್ಯಾಕ್ ಗೆ ಅದೆಷ್ಟೂ ಹುಡುಗಿಯರು ಸಾಯ್ತಾರೋ ಗೊತ್ತಿಲ್ಲ. ಎಲ್ಲಾ ಊರಿನಲ್ಲಿ ಪ್ರತಿಯೊಂದು ಓನಿಯಲ್ಲಿ ಅಂಗಿ ಬಿಚ್ಚಿ ಬರೀ ಇಲ್ಯಾಸ್ಟಿಕ್ ಚಡ್ಡಿ ಮ್ಯಾಗ ಸಿಕ್ಸ್‍ಪ್ಯಾಕ್ ತೋರಿಸಕೋತ ನಿಂತ್ರು ಒಂದ್ ಹುಡುಗಿನೂ ಅವನ ಜೊತೆ ‘ಸೆಲ್ಪಿ’ ತೊಗೊಂಡಿದ್ದು ಚಾನ್ಸೆಯಿಲ್ಲ.
ಹಂಗಂತ ಅವನೇನು ಬಾರ್‍ಗೆ ಹೋಗಿ ಕಂಟಮಟ ಕುಡಿದು ಉಪ್ಪಿನಕಾಯಿ ನೆಕ್ಕುತ್ತಾ ‘ಸರಾಯಿ ಶಿಷೆಯಲಿ ನನ್ನ ದೇವಿ ಕಾಣುವಳು’ ಅಂತ ಪ್ಯಾಥೋ ಸಾಂಗ್ ಹಾಡಿಲ್ಲ. ಅದಕ ಅಂವ ನನ್ನ ಪ್ರೀತಿ ಪಾತ್ರ ದೇವರು.
ಹನುಮಪ್ಪ ನಿನ್ ಜೋತೆ ಯಾರೂ ಇಲ್ಲ ಅಂತ ಚಿಂತಿ ಮಾಡಬ್ಯಾಡ. ನಾ ಅದೀನಿ. ನಾನು ನಿಂನಂಗ ಯಾವ ಹುಡುಗೀನು ಕಣ್ ಎತ್ತಿ ನೋಡಿಲ್ಲ. (ಒಂದ್ ಕಣ್ಣು ಮುಚ್ಚಿ ನೋಡಿನಿ) ಇಬ್ರು ಸೇರಿ ‘ಹುಡುಗಿರೆಂದ್ರೆ ಡೆಂಜರಪ್ಪೋ’ ಅಂತ ಲೈಡ್‍ಸ್ಪೀಕರ್ ಆನ್ ಮಾಡಿ ಹಾಡಕೊತ ಕುಣಕೊತ ಎಂಜಾಯ ಮಾಡೋಣು.
ಒಂದ್ ಮಾತ ಕೇಳ್ತಿನಿ ಸಿಟ್ಟ ಆಗಬ್ಯಾಡಾ, ನಂಗ ಚೋಲೋ ಹುಡುಗಿ ಸಿಗ್ಲಿ ಅಂತ ಆರ್ಶೀವಾದ ಮಾಡು..!
ಲೇಖನ : ಸಂಗಮೇಶ ಡಿಗ್ಗಿ
8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಏಕಾಂಗಿಯೊಬ್ಬನ ದಾರಿಯ ಕವಲುಗಳು...

ಇಷ್ಟೂ ದೂರ ಸಾಗಿ ಬಂದರೂ ನಾನು ಇನ್ನು ಗುರಿ ಮುಟ್ಟೆ ಇಲ್ಲ ಎಂಬ ಕಠೋರ ಸತ್ಯ ಅರಿವಿಗೆ ಬರುವದು ಒಮ್ಮೆ ಕತ್ತು ತಿರುಗಿಸಿ ಹಿಂದೆ ನೋಡಿದಾಗ. ನಾವು ಅಂದುಕೊಂಡ ಕನಸು, ನಾವು ಕಟ್ಟಿಕೊಂಡ ಗುರಿಯನ್ನು ತಲುಪುವ ಹಾದಿಯಲ್ಲಿ ನೂರೆಂಟು ಕವಲುಗಳು, ತಗ್ಗುದಿನ್ನೆಗಳು ಹೆಡೆ ಬಿಚ್ಚಿ ಸ್ವಾಗತಿಸುತ್ತವೆ. ನಮ್ಮ ಮನಸಿನ ನಿರ್ಧಾರವನ್ನು ಕೇಳದೆ ಬೇರೆ ಯಾರದೋ ಮಾತಿಗೆ ನಮ್ಮ ಕನಸನ್ನು ಚಿವುಟಿ ಮತ್ತೊಬ್ಬರ ಕನಸಿಗೆ ಜೀತದಾಳಾಗಿ ದುಡಿಯುವ ಪರಿ ದಿಕ್ಕು ದೆಸೆಯಿಲ್ಲದೆ ಸುತ್ತುವ ದಿಕ್ಸೂಚಿಯಿಲ್ಲದ ಹಡಗಿನಂತಾಗುತ್ತದೆ. ನಾನು ಹೊಗುವ ದಾರಿ ನನಗೆ ಮಾತ್ರ ಸ್ಪಷ್ಟವಾಗಿ ಕಾಣುತ್ತದೆ ಹೊರತು ಬೇರೆ ಯಾರಿಗೂ ಅಲ್ಲ. ಅದು ಎಂದಿಗೂ ಕವಲೊಡೆದು ಅಪರಿಚಿತ ಊರಿಗೆ ಹೋಗುವದಿಲ್ಲ. ಅಂದುಕೊಂಡ ಗೂಡಿಗೆ ನಮ್ಮನ್ನು ಕರೆದೊಯ್ಯುತ್ತದೆ. ಅಲ್ಲಿ ನಮಗಾಗಿ ಸುಖ ಸಂತೋಷದ ನಿಧಿ ಕಾದು ಕೂತಿರುತ್ತದೆ. ನಾನು ಸಾಗುವ ಹಾದಿಯಲ್ಲಿ ಮುಳ್ಳಿದೆ ಅಂತ ಗೊತ್ತಿದ್ದರೂ ಅದು ನನಗೆ ಅಚ್ಚುಮೆಚ್ಚಿನ ಹಾದಿಯಾಗಿರುತ್ತದೆ. ಅಲ್ಲಿ ನನಗಾಗಿ ಹೂವು ಹಾಸಿಗೆ ಹಾಸಿರುತ್ತದೆ. ತಂಪು ತಂಗಾಳಿಯ ಜೊತೆ ನೆರಳು ನೀಡುತ್ತದೆ. ಅದಕ್ಕೆ ನಾನು ಮಾಡಬೇಕಾದದ್ದು ಇಷ್ಟೇ, ನನಗಾಗಿ ನಾನು ಬದುಕುವದು. ಇದು ಒಂತರಾ ಸ್ವಾರ್ಥ ಎನಿಸಿದರೂ ಪರರಿಗೋಸ್ಕರ ದಿನಗಟ್ಟಲೆ ವ್ಯಯಿಸುವ ನಾನು ನನಗೋಸ್ಕರ ಒಂದಷ್ಟು ಸಮಯ ಕೊಡುವದರಲ್ಲಿ ಏನು ತಪ್ಪಿದೆ..? ಅದೇ ಸಂತೆಯ ಪರಿಚಿತವಿರುವ ಮಂದಿಯ ನಡುವೆ ನಮ್ಮ ದಾರಿ ಸಿಕ್ಕು ದಿಕ್ಕಾಪಾಲಾಗಿ ದಡ

ಮೊಸರು ಮಾರುವ ಹುಡುಗನ ಸೈಕಲ್ ಮತ್ತು ಪ್ಲಾಶ್‍ಬ್ಯಾಕ್ ನೆನಪು

‘ಕಾಲನ ಕೈಗೆ ದೇವರು ಸೃಷ್ಟಿ ಮಾಡಿದ ಜಗತ್ತು ಉಳಿಯುವದಿಲ್ಲವೆಂದ ಮೇಲೆ ನಾವು ಯಾವ ಲೆಕ್ಕ’ ಏಲ್ಲೋ ಓದಿದ ಅಣಿಮುತ್ತು ಮೊನ್ನೆ ದುತ್ತನೆ ಮೆದುಳಿನಲ್ಲಿ ಗುಂಗಿ ಹುಳದಂತೆ ಕಾಡತೊಡಗಿತು. ಕಾರಣವಿಷ್ಟೇ, ಎಮ್.ಎ ಮುಗಿಯುವ ಸಮಯವೂ ಹೌದು, ಅದಕ್ಕಿಂತ ಮುಖ್ಯವಾಗಿ “ಆನಂದಮಾರ್ಗ ಆಶ್ರಮ” ತೊರೆಯಬೇಕಲ್ಲ ಎನ್ನುವ ನೋವು. ಆ ನೋವಿಗೆ ಕಾರಣವಾದವನು ದಿನಾಲೂ ಗಟ್ಟಿ ಕೆನೆ ‘ಮೊಸರು ಮಾರುವ ಹುಡುಗ’ ಮತ್ತು ಆತನ ‘ಸೈಕಲ್’. ಆ ಹುಡುಗ 7ನೇ ತರಗತಿ. ಯಲ್ಲಪ್ಪ ಮನ್ಸೂರ. ಸುಮಾರು 3 ಕಿ.ಮಿ ಸೈಕಲ್ ತುಳಿದು ಮೊಸರು ಮಾರುವ ಕಾಯಕ ಮಾಡುತ್ತಾನೆ. ಅದಕ್ಕಿಂತ ಹೆಚ್ಚಾಗಿ ಮುಂಜಾನೆಯ ಎಳೆ ಬಿಸಿಲಿನಲ್ಲಿ ಮಲಗಿದ್ದ ಹಾಸಿಗೆ ಹೊದ್ದು ಮಲಗಿದ್ದ ನನಗೆ ಎಚ್ಚರಿಸುವ ಅಲರಾಂ ಬೆಲ್ ಎಂತಲೇ ಹೇಳಬಹುದು. ಅವನ ಸೈಕಲ್ ಮಾಯಲೋಕದ ಕಿನ್ನರರು ತಮ್ಮ ವಾಹನಗಳಿಗೆ ಶೃಂಗಾರ ಮಾಡಿದಂತೆ ಗಾಲಿಗಳಿಗೆ ರಿಬ್ಬನ್ ಸುತ್ತಿ, ಯುದ್ಧಕ್ಕೆ ಸಿದ್ಧನಾಗಿದ್ದೆನೆ ಎನ್ನುವ ರೀತಿ ಭಾವುಟ ತೋರಿಸಿ, ಗೆಂಡೆಗಳನ್ನು ಗಾಳಿಗೆ ಹಾರಾಡಿಸುತ್ತಾ ಗಂಟೆ ಬಾರಿಸುವ ಗತ್ತು ನನ್ನನ್ನು ಬಾಲ್ಯದ ಪ್ಲಾಶ್‍ಬ್ಯಾಕ್‍ಗೆ ಕರೆದೊಯ್ಯುವಂತೆ ಮಾಡಿತ್ತು. ತೂತು ಬಿದ್ದು ಪುಕ್ಸಟ್ಟೆ ಅಂಡು ಕಾಣಿಸುವ ದೊಗಳೆ ಚಡ್ಡಿ ಹಾಕಿಕೊಳ್ಳುತ್ತಿದ್ದ ವಯಸ್ಸಿನ ಹುಡುಗ ನಾನಾಗಿದ್ದೆ. ‘ಮೊದ ಮೊದಲು ಕೊಂಡ ಹೀರೋ ಸೈಕಲ್’ ಎಂಬತೆ ಪುಟ್ಟ ಸೈಕಲ್ ನಮ್ಮ ಮನೆಯ ಅಂಗಳವನ್ನು ಅಲಂಕರಿಸಿತ್ತು. ಇಡೀ ಊರಿಗೆ ಮೊದಲ ಸೈಕಲ್. ಊರಿನ ಜನ ಬಂದು ಅದನ್ನು ಮೈಸೂರ

ಜನರಲ್ ಬೋಗಿಯಂಬ ವೈವಿಧ್ಯಮಯ ತಾಣ...

‘ಯುವರ್ ಅಟೇಕ್ಷನ್ ಪ್ಲೀಸ್ ಹುಬ್ಬಳ್ಳಿ ಟೂ ಸೋಲಾಪೂರ ಪ್ಯಾಸೆಂಜರ್ ಟ್ರೇನ್ ಅರೈವಲ್” ಗಾನ ಮೊಳಗಿಸುತ್ತಾ ಮೈಕ್ ಎಚ್ಚರಿಸುತ್ತಿದ್ದಂತೆ ತಮ್ಮ ತಮ್ಮ ಬ್ಯಾಗ್‍ಗಳನ್ನು ಎತ್ತಿಕೊಂಡು, ಮಕ್ಕಳ ಕೈ ಹಿಡಿದು, ಜೊತೆ ಬಂದವರಿಗೆ ಗುಡ್ ಬೈ ಹೇಳಿ ಬೋಗಿಯೊಳಗೆ ಕಾಲಿಡುವ ಮಂದಿ ಇರುವೆಗಳು ಸಕ್ಕರೆಗೆ ಮುತ್ತಿಕ್ಕುವಂತೆ ಕಾಣುತ್ತದೆ. ಕೆಲಸದ ಬೇರೆ ಊರಿಗೆ ತೆರಳುವವರು, ಅಪ್ಪಅಮ್ಮನನ್ನು ಕಾಣಲು ತೆರಳುವವು, ಹೆಂಡತಿಯ ಊರಿಗೆ, ಸ್ನೇಹಿತರ ಮಧುವೆ ಮುಂಜಿಗೆ, ಇಲ್ಲಾ ಸಂಬಂಧಗಳನ್ನು ಕಡಿದುಕೊಂಡು ಪರವೂರಿನಲ್ಲಿ ನೆಲೆ ಕಾಣಲು, ಹಲವಾರು ಕಾರಣಗಳನ್ನು ಇಟ್ಟುಕೊಂಡು ಬಂದ ಪ್ರಯಾಣಿಕರು ಸೀಟು ಹಿಡಿಯುವ ಧಾವಂತದಲ್ಲಿ ಇದ್ದರೆ ಕಂಕಳಲ್ಲಿ ಕುಳಿತ ಮಗು ಬೆರಗುಗಣ್ಣಿನಿಂದ ಕಿಟಕಿಯತ್ತ ಕಣ್ಣು ಹಾಯಿಸುತ್ತದೆ. ಜಾತೀಗೀತಿಯ ಬಂಧನವನ್ನು ಕಾಣದ ಏಕೈಕ ಸ್ಥಳವೆಂದರೆ ಅದು ರೈಲು ಬೋಗಿ. ಪಕ್ಕದವನ ಜಾತಿಯನ್ನು ಕೇಳದೆ ಮೈ ಅಂಟಿಸಿಕೊಂಡು ನಿಟ್ಟುಸಿರು ಬಿಡುತ್ತಾ ತಮ್ಮದೆ ಯೋಚನಾ ಲಹರಿಯಲ್ಲಿ ಮುಳುಗಿ ಬಟ್ಟೆಗಳನ್ನು ಸರಿಮಾಡಿಕೊಳ್ಳುತ್ತಾರೆ. ಸುತ್ತಲು ಒಮ್ಮೆ ಕಣ್ಣು ಹಾಯಿಸಿದರೆ ಸೂಟುಬೂಟು ಹಾಕಿಕೊಂಡ ಶ್ರೀಮಂತ, ದೊಗಳೆ ಅಂಗಿ ಧರಿಸಿದ ಮದ್ಯಮ ಕುಟುಂಬ ವ್ಯಕ್ತಿ, ಧೊತರಕ್ಕೆ ನೀಲಿಬಳಿದುಕೊಂಡ ಹಳ್ಳಯ ಹಿರಿಯ, ದಾಡಿ ಬಿಟ್ಟ ಮುಲ್ಲಾ, ಆಗ ತಾನೆ ಮಧುವೆಯಾದ ಜೋಡಿಗಳು, ಹಳ್ಳಿ ಹೆಂಗಸರು, ಚಿಕ್ಕಮಕ್ಕಳು, ಅಷ್ಟೆ ಅಲ್ಲದೆ ಬಿಸ್ಕಿಟ್ ಮಾರುವವವರು, ಬಿಕ್ಷುಕರು, ಚಪ್ಪಾಳೆ ತಟ್ಟುವ ಮಂಗಳಮು