ವಿಷಯಕ್ಕೆ ಹೋಗಿ

ಸೂರ್ಯಪುತ್ರರ ನೋವಿಗೆ ಇಲ್ಲಿದೆ ಪರಿಹಾರ

ಹರೆಯದ ವಯಸಲ್ಲಿ ಬೇಗನೆ ಏಳುವದು ಕಷ್ಟಕಣ್ರೀ. ಗಲ್ಲಿಗೇರಿಸುವ ಶಿಕ್ಷೆಯಾದ್ರೂ ಕೊಡಿ ಬೆಳಗ್ಗಿನ ಜಾವದಲ್ಲಿ ಏಳುವ ಕೆಲಸ ಹಚ್ಚಬೇಡಿ. ರಾತ್ರಿ ಮೂರರವರೆಗೆ ಸಿನಿಮಾ, ಮೇಸೆಜು, ವಾಟ್ಸಾಪ್ ಅಂತ ಟೈಮ್‍ತಿಂದು ಮುಸುಕು ಹೊದ್ದು ಮಲಗಿದಾಗ ಜಗದ ಪರಿವೆ ಇಲ್ಲದೆ ಲೋಕದ ಯಾವುದೇ ಚಿಂತೆ ಇಲ್ಲದವರಂಥೇ ನಿದ್ದೆ ಆವರಿಸಿರುತ್ತದೆ.
ಬೆಳಗ್ಗೆ ಯಾರಾದ್ರೂ ಮುಸುಕು ಹೊದ್ದು ಮಲಗಿದವನನ್ನು  ಎಚ್ಚರಿಸಿದಾಗ ಎದುರಿನವರ ಕೆನ್ನೆಯ ಮೇಲೆ ಬಿಟ್ಟಿಯಾಗಿ ಬಾಸುಂಡೆ ಮೂಡಿಸುವಷ್ಟು ಸಿಟ್ಟು ಬರುತ್ತದೆ. ಅಲ್ರೀ ನೀವೆ ಹೇಳ್ರೀ... ಬೆಳಗ್ಗಿನ ಜಾವದಲ್ಲಿ ದೀಪಿಕಾ ಪಡುಕೋಣೆ ನಮ್ಮ ಜೊತೆ “ಚಾಟ್‍ಮಸಾಲ” ತಿನ್ನುವಾಗ ಯಾರಾದ್ರೂ ಡಿಸ್ಟರ್ಬ್ ಮಾಡಿದರೆ ನಿಮಗೂ ಸಿಟ್ಟು ಬರಲ್ವಾ..? ತಿಳಿನೀಲಿ ಕಂಗಳ ಹುಡುಗಿಯ ನೆನೆದು ಪೋಲಿ ಕನಸು ಕಾಣುತ್ತಾ ಅವಳ ಹತ್ತಿರ ಹೋಗಿ ಮುತ್ತನ್ನು ಕೊಡುವ ಸಮಯದಲ್ಲಿ ಮೈ ಮೇಲೆ ತಣ್ಣಿರು ಸುರಿದರೆ ಎಬ್ಬಿಸಿದವರನ್ನು ಜಾಡಿಸಿ ಒದೆಯುವಷ್ಟು ಸಿಟ್ಟು ಬರಲ್ವಾ..?
ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿದ್ರೆ ಪರ್ಸನಾಲಿಟಿ ಚನ್ನಾಗಿ ಇರುತ್ತೆ ಅಂತ ಅದೇಷ್ಟೂ ಜನ ನಂಗೆ ತಲೆತಿನ್ನುತ್ತಿದ್ದರು. ನಾನೇನೊ ಜಾಂಗಿಗ್ ಮಾಡಲು ಆಸೆ. ಆದ್ರೆ ತಕರಾರು ಇರೋದು ನಸುಕಿನ ಜಾವ 5 ಗಂಟೆಗೆ ಏಳೋದು. ಸ್ವಾಮಿ ವಿವೇಕಾನಂದರು ನಮ್ಮಂತ ಸೂರ್ಯಪುತ್ರರಿಗೆ ದೇಶವನ್ನು ಮುನ್ನಡೆಯುವದಕ್ಕೊಸ್ಕರ  “ಏಳಿ ಎದ್ದೇಳಿ’ ಅಂತ ಸಿಂಹಘರ್ಜನೆ ಮಾಡಿದ್ದಾರೆ. ಎಷ್ಟು ಗಂಟೆಗೆ ಏಳಬೇಕು ಎಂದು ಹೇಳಿಲ್ಲ ಅಲ್ವಾ...! ಎಂಬುದು ನನ್ನಂತ ಅಮಾಯಕರ ಪ್ರಶ್ನೆಯಾಗಿದೆ.
ನಾನು ಹತ್ತನೇ ತರಗತಿ ಓದುವಾಗ ನಮ್ಮಪ್ಪ ಮುಂಜಾನೆ ಓದಿದರೆ ತಲೆಗೆ ಹತ್ತುತ್ತೆ ಅಂತ ತಲೆ ತಿನ್ನುತ್ತಿದ್ದ. ಸೂರ್ಯ ನೆತ್ತಿಯ ಮೇಲೆ ಬಂದು ಛೀತೂ ಅಂತಾ ಉಗುಳಿ ಕಾಲಾಗಿನ ಕೆರ ತೊಗೊಂಡು ಹೊಡೆದರೂ ಏಳದ ನಾನು ಅಪ್ಪನ ಬೆತ್ತದ ಏಟಿನಿಂದ ಏಳುವದು ಮಾಮೂಲಿಯಾಗಿತ್ತು. ಅವತ್ತೆ ಬೇಗ ಎದ್ದು ನಮ್ಮಪ್ಪ ವಿರುದ್ದ ಸೇಡು ತಿರಿಸಿಕೊಳ್ಳಬೇಕು ಎಂದು ‘ಅಲರಾಂ’ ಗಡಿಯಾರ ಕೊಂಡೆ.
ಬೆಳಗ್ಗೆ 5 ಗಂಟೆಗೆ ಅಲರಾಂ ಇಟ್ಟು ಮಲಗಿದಾಗ ಸುಖ ನಿದ್ದೆ ಆವರಿಸಿ ಕನಸಲ್ಲಿ ಚಂದ್ರನ ಅಂಗಳದಲ್ಲಿ ನಮ್ಮುಡುಗಿ ಜೊತೆ ಮೊಲದ ಜೊತೆ ಆಟವಾಡುತ್ತಾ ಇದ್ದೆ. ಇತ್ತ ಕಡೆ ಅಲರಾಂ ಬಾರಿಸುತ್ತಿದ್ದರು ಅದರ ತಲೆಗೆ ಟಕ್ ಅಂತ ಕುಟ್ಟಿ ಅದರ ಬಾಯಿ ಮುಚ್ಚಿ ಮತ್ತೆ ನಮ್ಮುಡುಗಿ ಜೊತೆ ಆಟವಾಡಲು ಪೂರ್ವಸಿದ್ದತೆ ಮಾಡಿಕೊಳ್ಳುತ್ತಿದ್ದೆ. ಮತ್ತೆ ಅಲರಾಂ ಗಂಟೆ ಸದ್ದು. ಮತ್ತೆ ನೆತ್ತಿಯ ಮೇಲೆ ಹೊಡೆತ. ಚಳಿಗೆ ಮೈ ನಡುಗಿ ಚಳಿಯಾದಾಗ ಬಾಜು ಮಲಗಿದ್ದ ಅಪ್ಪನ ಕೌದಿಯನ್ನು ಎಳೆದು ರಾಜಾರೋಷವಾಗಿ ಮಲಗಿದೆ. ಎದ್ದಾಗ 10 ಗಂಟೆ. ಅವತ್ತು ಮನೆಯಲ್ಲಿ ಅಪ್ಪನ “ಬೈಗುಳಗಳ ಅಲರಾಂ” ರಣಕಹಳೆಯಂತೆ ಮೊಳಗುತಿತ್ತು. ನೀನು ಈ ಭೂಮಿಯ ಮೇಲೆ ಬದುಕಿರುವದು ನಾಲಾಯಕ್ಕೂ, ಸುನ್ನು ಅಕ್ಕನ ನೋಡಿಯಾದರೂ ಕಲಿ, ದಂಡಪಿಂಡ ವಂಶದವನೆ ರಾತ್ರಿ ಲೇಟಾಗಿ ಮಲಗಲು ಅದೇನು ಘನಂದಾರಿ ಕೆಲಸ ಮಾಡ್ತಿ..? ಇತ್ಯಾದಿ ಬಿರುದಾವಳಿಗಳ ಅಭಿಷೇಕ ಎಡೆಬಿಡೆಯಿಲ್ಲದೆ ನಡೆಯುತಿತ್ತು. ಅದನ್ನು ನೋಡಿ ಅಕ್ಕ ಮುಸಿಮುಸಿ ನಗುತ್ತಾ ಹೀಯಾಳಿಸುತಿದ್ದಳು. ಅಪ್ಪ ಹೊಡೆದಾಗ ಸಿಟ್ಟು ಬರುವದಕ್ಕಿಂತ ಅಕ್ಕ ನನ್ನನ್ನು ಗೇಲಿ ಮಾಡುವಾಗ ಎರಡುಪಟ್ಟು ಸಿಟ್ಟು ಬಂದು ಆಕೆಯನ್ನು ಹೊಡೆಯಬೇಕು ಎನಿಸುತಿತ್ತು. ಅವ್ವ ಮಾತ್ರ ‘ನೀನು ನನ್ನ ಬಂಗಾರಕಂದ ಅಲ್ವಾ ಬೇಗ ಏಳುವ ಅಭ್ಯಾಸ ಮಾಡಬೇಕು’ ಎಂದು ಮುದ್ದು ಮಾಡುತ್ತಿದ್ದಳು. ಸಾಲದೆಂಬಂತೆ ಬಿಸಿಬಿಸಿ ಹಾಲು, ಬ್ರೆಡ್ಡಿನ ಚೂರು ಕೊಡುತ್ತಿದ್ದಳು.
ಪಕ್ಕದ ಮನೆಯ ಪಾತರಗಿತ್ತಿ ಚಿತ್ರವಿರುವ ಕೆಂಪುಲಂಗಾ ತೊಡುವ ಪೋರಿ ಮುಂಜಾನೆ ಬೇಗ ಎದ್ದು ಓದಿ ನಮ್ಮ ಊರಿಗೆ ಮೊದಲನೇ ಸ್ಥಾನದಲ್ಲಿ ಪಾಸಾಗಿದ್ದಳು. ಅದಕ್ಕೆ ಅವರಪ್ಪ ಊರತುಂಬ ಹೇಳಿ ತಿರುಗಿದ್ದೆ ತಿರುಗಿದ್ದು ‘ನನ್ನ ಮಗಳನ್ನು ನೋಡಿ ಕಲೀರಿ’ ಅಂತ. ಬಡ್ಡಿಮಗ ಅವನಿಗೇನು ಗೊತ್ತು ನಮ್ ಗಂಡ್‍ಹೈಕಳು ಅವಳನ್ನು ನೋಡಿಯೇ ಬರ್ಬಾದ ಆಗಿದ್ದಾರೆ ಅಂತ. ಇಂತವುಗಳೆಲ್ಲವೂ ಸೂರ್ಯಪುತ್ರರು ದಿನಾಲು ಅನುಭವಿಸುವ ಮಾನಸಿಕ ಕಿರಿಕಿರಿಯಾಗಿದೆ. ಅವರಿಗೆ ಯಾರು ಬಿಡಿಗಾಸು ಮರ್ಯಾದೆ ಕೊಡುತ್ತಿಲ್ಲ.
ಅದಕ್ಕಾಗಿಯೇ ನಾನು ಬೇಗ ಏಳುವವರಿಗಾಗಿಯೇ ಕೆಲವು ಸಲಹೆಗಳನ್ನು ಕಂಡುಹಿಡಿದಿದ್ದೆನೆ. ಅವು ಈ ಕೆಳಗಿನಂತಿವೆ.
    ಆದಷ್ಟೂ ಮಂದಿರ/ ಮಸೀದ್ ಪಕ್ಕದಲ್ಲಿ ವಾಸಮಾಡಿ. ಅವರು ಬೆಳ್ಳಂಬೆಳಗ್ಗೆ ಮೈಕ್‍ನಲ್ಲಿ ಮೊಳಗುವ ಪ್ರಾರ್ಥನೆಯಿಂದ ಎಚ್ಚರವಾಗುತ್ತಿರಿ.
    ಕೆಟ್ಟ ಸಂಗಾತಿಯನ್ನು  ಮಧುವೆಯಾಗಿ ಅವಳು ಕೊಡುವ ತಾಪತ್ರಯದಿಂದ ಶಾಂತಿ ನೆಮ್ಮದಿ ಎಲ್ಲಾ ಕಾಣೆಯಾಗಿ ನೀವು ಜೀವನಪರ್ಯಂತ 24*7 ಎಚ್ಚರದಿಂದ ಇರುತ್ತಿರಿ.
    ರೂಮಲ್ಲಿ ತಿಗಣೆ, ಜಿರಳೆ ಹಲ್ಲಿಯನ್ನು ಸಾಕಿ. ಅವುಗಳು ನಿಮಗೆ ನಿದ್ದೆಯನ್ನು ಬರಲು ಅನುವು ಮಾಡಿಕೊಡದೆ ನೀವು ಎಚ್ಚರಿದಿಂದ ಇರುತ್ತಿರಿ.
    ನಿಮ್ ಹುಡುಗಿಗೆ ಬೆಳಗ್ಗೆ ಕಾಲ್ ಮಾಡಲು ಹೇಳಿ ಅವಾಗ ನೀವು ಖಂಡಿತವಾಗಿ ಎಚ್ಚರವಾಗುತ್ತಿರಿ.
    ಹೊಸ ರುಚಿ ಟ್ರೈಮಾಡಿ ರಾತ್ರಿ ಒಗ್ಗರಣೆಗೆ ಹರಳೆಣ್ಣೆ ಹಾಕಿ ತಿನ್ನಿ, ಬೆಳ್ಳಂಬೆಳಗ್ಗೆ ಚೊಂಬು ಹಿಡಿಯುವ ಕಾರ್ಯ ಒದಗಿ ಬರುವದರಿಂದ ನೀವು ಖಂಡಿತವಾಗಿ ಬೇಗ ಎದ್ದೆಳುತ್ತಿರಿ.
    ಮಲಗೊ ಮುಂಚೆ ನ್ಯೂಸ್‍ಪೇಪರ್ ಓದಲು ಹೋಗಬೇಡಿ. ಅದರಲ್ಲಿ ನಿದ್ದೆಯಮಗ, ಮಣ್ಣಿನ ಮಗ ಅಂತ ವಿಧಾನಸೌಧದಲ್ಲಿ ಮಲಗಿರುವ ನಾಯಕರ ಪೋಟೊ ಇರುತ್ತದೆ. ಅದನ್ನು ನೋಡಿದ ನಿಮಗೆ ನಿದ್ದೆ ಆವರಿಸಿ ಬೆಳಗ್ಗೆ ಏಳಲು ತೊಂದರೆಯಾಗುತ್ತದೆ..!
    ಇನ್ನು ಸುಲಭವಾದ ಉಪಾಯ ಎಂದರೆ ರಾತ್ರಿ ಮಲಗದೇ ಇರುವುದು..!
ಅದಕ್ಕೂ ಆಗಲಿಲ್ಲ ಎಂದರೆ ನನಗೆ ತಿಂಗಳಿಗೆ 30 ಸಾವಿರ ರೂಪಾಯಿ ಸಂಬಳ ಕೊಡಿ ನಿಮ್ಮನ್ನು ನಾನು ಖಂಡಿತಾ ಎಬ್ಬಿಸುತ್ತೇನೆ. ಆದರೆ ಅದಕ್ಕಿಂತ ಮೊದಲು ನೀವು ನನ್ನನ್ನು ಎಬ್ಬಿಸಬೇಕು ಅಷ್ಟೇ...!!!!
ಲೇಖನ : ಸಂಗಮೇಶ ಡಿಗ್ಗಿ
8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾನವ ಘನತೆಯ ಪ್ರತಿಪಾದಕ: ಬಿಜವಾಡ ವಿಲ್ಸನ್

 ಮಲಹೊರುವ ಪದ್ದತಿ ತನ್ನ ಕುಲ ಕಸುಬು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನೋರ್ವ ತನ್ನ ದೃಡ ನಿರ್ಧಾರದಿಂದ ದೇಶಾದ್ಯಂತ ಮಲ ಹೊರುವ ಅಮಾನವೀಯ ಪದ್ಧತಿ ವಿರುದ್ಧ ಜನಾಂದೋಲನ ರೂಪಿಸಿ ಮಾನವ ಘನತೆಯ ಬದುಕು (ಡಿಗ್ನಿಟಿ ಆಪ್ ಲೈಪ್)ನ್ನು ತನ್ನ ಹೋರಾಟದ ಮೂಲಕ ಎತ್ತಿ ಹಿಡಿದ ಉದ್ದೇಶಕ್ಕಾಗಿ 2016ನೇ ಸಾಲಿನ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ಅವರ ಹೆಸರು ಕೋಲಾರ ಜಿಲ್ಲೆಯ ಕೆಜಿಎಪ್ ಮೂಲದ ಬಿಜವಾಡ ವಿಲ್ಸನ್. ಆಂದ್ರದ ಓಂಗೋಲ್ ಜಿಲ್ಲೆಯ ಕಂಬಾಲದೇನು ಗ್ರಾಮದ ಬಿಜವಾಡ ಜಾಕೋಬ್ ಎಂಬುವವರು 1935ರ ಸಂದರ್ಭದಲ್ಲಿ ಕೆಜಿಎಪ್‌ಗೆ ಆಗಮಿಸಿ ಇಲ್ಲಿನ ಬಿಜಿಎಂಎಲ್ ಕಾರ್ಖಾನೆಯಲ್ಲಿ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. 1966ರಲ್ಲಿ ವಿಲ್ಸನ್ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೆರೆಯ ಕುಪ್ಪಂನಲ್ಲಿ ನೆರವೇರಿಸಿದ ವಿಲ್ಸನ್ ಕೆಜಿಎಪ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ತದಂತರ ಹೈದರಾಬಾದ್ ವಿವಿಯಲ್ಲಿ ರಾಜಕೀಯ ಶಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಲಹೊರುವ ಕುಲ ಕಸುಬು ತನ್ನ ಕೊನೆಯ ಮಗನಿಗೆ ತಟ್ಟದಿರಲಿ ಎಂಬ ಕಾರಣಕ್ಕೆ ವಿಲ್ಸನ್ ಅವರನ್ನು ಕುಪ್ಪಂನ ವಿದ್ಯಾರ್ಥಿ ನಿಲಯದಲ್ಲಿ ಸೇರಿಸಿ ಶಿಕ್ಷಣ ಕೊಡಿಸಿದ್ದೇ ಪಾಲಕರ ಮಹತ್ಸಾಧನೆಯಾಗಿತ್ತು. ಮಲ ಹೊರುವ ಸಮುದಾಯದವ ಎಂಬ ಕಾರಣಕ್ಕೆ ಸಹ ಪಾಠಿಗಳಿಂದ ಅವಮಾನಕೊಳಗಾಗಿದ್ದ ವಿಲ್ಸನ್ ಇದಕ್ಕೆ ಕಾರಣ ಹುಡುಕಲು ಹೊರಟಾಗ ಪಾಲಕರು ಸತ್ಯ ಮರೆಮ...

ಮೊಸರು ಮಾರುವ ಹುಡುಗನ ಸೈಕಲ್ ಮತ್ತು ಪ್ಲಾಶ್‍ಬ್ಯಾಕ್ ನೆನಪು

‘ಕಾಲನ ಕೈಗೆ ದೇವರು ಸೃಷ್ಟಿ ಮಾಡಿದ ಜಗತ್ತು ಉಳಿಯುವದಿಲ್ಲವೆಂದ ಮೇಲೆ ನಾವು ಯಾವ ಲೆಕ್ಕ’ ಏಲ್ಲೋ ಓದಿದ ಅಣಿಮುತ್ತು ಮೊನ್ನೆ ದುತ್ತನೆ ಮೆದುಳಿನಲ್ಲಿ ಗುಂಗಿ ಹುಳದಂತೆ ಕಾಡತೊಡಗಿತು. ಕಾರಣವಿಷ್ಟೇ, ಎಮ್.ಎ ಮುಗಿಯುವ ಸಮಯವೂ ಹೌದು, ಅದಕ್ಕಿಂತ ಮುಖ್ಯವಾಗಿ “ಆನಂದಮಾರ್ಗ ಆಶ್ರಮ” ತೊರೆಯಬೇಕಲ್ಲ ಎನ್ನುವ ನೋವು. ಆ ನೋವಿಗೆ ಕಾರಣವಾದವನು ದಿನಾಲೂ ಗಟ್ಟಿ ಕೆನೆ ‘ಮೊಸರು ಮಾರುವ ಹುಡುಗ’ ಮತ್ತು ಆತನ ‘ಸೈಕಲ್’. ಆ ಹುಡುಗ 7ನೇ ತರಗತಿ. ಯಲ್ಲಪ್ಪ ಮನ್ಸೂರ. ಸುಮಾರು 3 ಕಿ.ಮಿ ಸೈಕಲ್ ತುಳಿದು ಮೊಸರು ಮಾರುವ ಕಾಯಕ ಮಾಡುತ್ತಾನೆ. ಅದಕ್ಕಿಂತ ಹೆಚ್ಚಾಗಿ ಮುಂಜಾನೆಯ ಎಳೆ ಬಿಸಿಲಿನಲ್ಲಿ ಮಲಗಿದ್ದ ಹಾಸಿಗೆ ಹೊದ್ದು ಮಲಗಿದ್ದ ನನಗೆ ಎಚ್ಚರಿಸುವ ಅಲರಾಂ ಬೆಲ್ ಎಂತಲೇ ಹೇಳಬಹುದು. ಅವನ ಸೈಕಲ್ ಮಾಯಲೋಕದ ಕಿನ್ನರರು ತಮ್ಮ ವಾಹನಗಳಿಗೆ ಶೃಂಗಾರ ಮಾಡಿದಂತೆ ಗಾಲಿಗಳಿಗೆ ರಿಬ್ಬನ್ ಸುತ್ತಿ, ಯುದ್ಧಕ್ಕೆ ಸಿದ್ಧನಾಗಿದ್ದೆನೆ ಎನ್ನುವ ರೀತಿ ಭಾವುಟ ತೋರಿಸಿ, ಗೆಂಡೆಗಳನ್ನು ಗಾಳಿಗೆ ಹಾರಾಡಿಸುತ್ತಾ ಗಂಟೆ ಬಾರಿಸುವ ಗತ್ತು ನನ್ನನ್ನು ಬಾಲ್ಯದ ಪ್ಲಾಶ್‍ಬ್ಯಾಕ್‍ಗೆ ಕರೆದೊಯ್ಯುವಂತೆ ಮಾಡಿತ್ತು. ತೂತು ಬಿದ್ದು ಪುಕ್ಸಟ್ಟೆ ಅಂಡು ಕಾಣಿಸುವ ದೊಗಳೆ ಚಡ್ಡಿ ಹಾಕಿಕೊಳ್ಳುತ್ತಿದ್ದ ವಯಸ್ಸಿನ ಹುಡುಗ ನಾನಾಗಿದ್ದೆ. ‘ಮೊದ ಮೊದಲು ಕೊಂಡ ಹೀರೋ ಸೈಕಲ್’ ಎಂಬತೆ ಪುಟ್ಟ ಸೈಕಲ್ ನಮ್ಮ ಮನೆಯ ಅಂಗಳವನ್ನು ಅಲಂಕರಿಸಿತ್ತು. ಇಡೀ ಊರಿಗೆ ಮೊದಲ ಸೈಕಲ್. ಊರಿನ ಜನ ಬಂದು ಅದನ್ನು ಮೈಸೂರ...

ಬಾ ಮಳೆಯೆ ಬಾ....

ಮೂರುಸಂಜೆ ಸಮಯ. ಭೂಮಿಯನ್ನು ಅಪ್ಪಿ ತಬ್ಬಿಕೊಳ್ಳಲು ಮಳೆ ಹನಿಗಳು ಪೈಪೋಟಿಗೆ ಬಿದ್ದಂತೆ ತಾಮುಂದು ನಿಮುಂದು ಎಂದು ಧರಣಿಯ ಕೆನ್ನೆಗೆ ಮುತ್ತಿಕ್ಕುತ್ತವೆ. ಕಾದು ಸುಡುವ ಹಂಚಾಗಿದ್ದ ಭೂಮಿಗೆ ತಣ್ಣನೆಯ ಬಟ್ಟೆಯನ್ನು ಹೊದಿಸಿದ ಅನುಭವ. ಊರ ತುಂಬ ಪಸರಿಸಿದ ಮಣ್ಣ ಸುವಾಸನೆಗೆ ಪಾರಿಜಾತದ ಘಮವು ಸಪ್ಪೆಯಾಗಿದೆ. ಯಾವ ಸೀಮೆಯ, ಯಾವ ಊರಿನ, ಯಾವ ಕೇರಿಯ ನೀರು ಆವಿಯಾಗಿ, ಹೆಪ್ಪುಗಟ್ಟಿ, ಮೋಡವಾಗಿ ಕರಗಿ ನೀರಾಗಿ ಪರಿಚಯವಿಲ್ಲದ ಜಾಗದಲ್ಲಿ ನಾಚಿಕೆ ಪಟ್ಟುಕೊಳ್ಳದೆ ಜಂಬವಿಲ್ಲದೆ ಸುರಿಯುವ ಅಮೃತಘಳಿಗೆಗೆ ಮಣ್ಣಿನೊಳಗೆ ಅಡಗಿ ಕುಳಿತ ಬೀಜ, ಸಸಿ, ಬೇರು ಬಾಯ್ತೆರೆದು ನಿಂತಿರುತ್ತದೆ ತುದಿಗಾಲ ಮೇಲೆ ಬೊಗಸೆಗಣನ್ನನ್ನು ಅರಳಿಸುತ್ತಾ. ಅಲ್ಲೆಲ್ಲೂ ಅಣಬೆಗಳು ಹಿಡಿಮಳೆಗೆ ಭೂಮಿ ನೆನೆಯುವದನ್ನು ತಪ್ಪಿಸಲು ಕ್ಷಣಮಾತ್ರದಲ್ಲಿ ಹೂವಾಗಿ ಅರಳಿ ನಿಲ್ಲುತ್ತವೆ ಹಬ್ಬದ ಛತ್ರಿ ಚಾಮರ ಕಂಡಂತೆ. ಪುಟುಪುಟು ನೆಗೆಯುತ್ತಾ ಓಡಾಡುವ ಕಪ್ಪೆಮರಿಗಳ ಆಟ ಪುಟ್‍ಬಾಲ್ ಆಟ ನೋಡುವಷ್ಟೇ ಮಜಭೂತವಾಗಿರುತ್ತದೆ. ದೇವರ ಆಟ ಬಲ್ಲವರ್ಯಾರು? ಹಸಿದು ಬರಗೆಟ್ಟ ಗಿಡಗಳು ಹಸಿರಾಗಲೂ ಜಡಿಮಳೆ ಬಸಿರಾಗುವಂತೆ ಮಾಡುತ್ತದೆ. ಎಲೆಯುದರಿ ಮುದುಡಿಕೊಂಡ ಗಿಡಗಳು ಮೆಲ್ಲನೆ ಮೈ ಕೊಡವಿಕೊಂಡು ಹಣ್ಣಾದ ಹಳದಿ ಎಲೆಗಳನ್ನು ಉದುರಿಸಿ ಚಿಗುರೆಲೆಗೆ ಜಾಗ ಮಾಡಿಕೊಡುತ್ತದೆ. ಮೆಲ್ಲಗೆ ಹೂವೊಂದು ಗರ್ಭದಿಂದ ಹೊರಬಂದು ನಗುತ್ತಾ ನಾಚಿ ನೀರಾಗುತ್ತದೆ ದುಂಬಿ ಬಂದು ಕುಳಿತಾಗ. ಕೊಟ್ಟಿಗೆಯಲ್ಲಿ ಧೂಳು ಬಡ...